ಹೆಬ್ರಿ: ದೆಹಲಿಯ ಎನ್ಎಸ್ಡಿ (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ವಿದ್ಯಾರ್ಥಿಗಳಿಗೆ ತಾಲ್ಲೂಕಿನ ನಾಡ್ಪಾಲು ಗ್ರಾಮದ ತಿಂಗಳೆ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರಿಂದ ತಿಂಗಳೆಯಲ್ಲಿ ಯಕ್ಷಗಾನ ತರಬೇತಿ ಶಿಬಿರ ಆರಂಭವಾಗಿದೆ.
ಶಿಬಿರಕ್ಕೆ ಚಾಲನೆ ನೀಡಿದ ಉದ್ಯಮಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಅವರು, ಗುರು ಸಂಜೀವ ಸುವರ್ಣ ಅವರಲ್ಲಿ ಯಕ್ಷಗಾನ ತರಬೇತಿ ಪಡೆಯುವುದೇ ಪುಣ್ಯದ ಕಾರ್ಯ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ, ಕಲಿಯುವ ತುಡಿತ, ಸಾಧಿಸುವ ಛಲ ಇದ್ದರೆ ಯಾವುದೇ ಕಲೆಯನ್ನು ಸುಲಲಿತವಾಗಿ ಅಭ್ಯಾಸ ಮಾಡಬಹುದು ಎಂದರು.
ಬನ್ನಂಜೆ ಸಂಜೀವ ಸುವರ್ಣ ಅವರ ಶಿಷ್ಯರಾದ ಶೃತಿ ಬಂಗೇರ, ಪಲ್ಲವಿ ಕೊಡಗು, ಶಿಶಿರ್, ಮನೋಜ್, ಕಾರ್ತಿಕ್ ಸುಮಂತ್ ತಂಡದವರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ವಿಕ್ರಮಾರ್ಜುನ ಹೆಗ್ಗಡೆ, ದೆಹಲಿ ಎನ್ಎಸ್ಡಿ ಮುಖ್ಯಸ್ಥ ವಿವೇಕ್, ಭಾಗವತರಾದ ಲಂಬೋದರ ಹೆಗಡೆ, ಶ್ರೀಧರ ಹೆಗಡೆ ಭಾಗವಹಿಸಿದ್ದರು. ಡಾ.ಪ್ರಶಾಂತ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.