ಕಾರ್ಕಳ: ‘ಜೀವನವನ್ನು ಸದ್ವಿನಿಯೋಗ ಮಾಡಲು ಆರೋಗ್ಯ ಪ್ರಧಾನವಾಗಿದ್ದು, ಆರೋಗ್ಯ ಭಾಗ್ಯಕ್ಕೆ ಯೋಗ ಸಹಕಾರಿ’ ಎಂದು ಕಾರ್ಕಳ ವಲಯ ಕೇತ್ರ ಶಿಕ್ಷಣಾಧಿಕಾರಿ ಜಿ.ಆರ್. ಚಂದ್ರಯ್ಯ ಹೇಳಿದರು.
ಇಲ್ಲಿನ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಭವನದಲ್ಲಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾದ ಯೋಗ ತರಬೇತಿ ಕಮ್ಮಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಇಂದು ದುಡಿಮೆ ಕಡಿಮೆಯಾಗಿದೆ. ದೇಹ ಶ್ರಮ ಬಹಳ ಕಡಿಮೆ. ಜತೆಗೆ ಕೆಟ್ಟ ಚಟಗಳು ನಮ್ಮನ್ನು ಆಳುತ್ತಿವೆ. ಹಾಗಾಗಿ, ಅವುಗಳಿಂದ ದೂರಾಗಬೇಕಾದರೆ ನಾವು ಯೋಗದತ್ತ ಹೆಚ್ಚು ಗಮನಕೊಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಮಾತನಾಡಿ, ‘ಮನಸ್ಸು ಮತ್ತು ದೇಹ ಸಂತುಲಿತವಾಗಿರಬೇಕೆಂದರೆ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು’ ಎಂದರು.
ಯೋಗ ತರಬೇತುದಾರ ಸಂಜಯ ಕುಮಾರ್, ನರೇಂದ್ರ ಕಾಮತ್ ಹಾಗೂ ಮಮತಾ ಗಣೇಶ್ ಮಾರ್ಗದರ್ಶನ ನೀಡಿದರು.
ವಿವೇಕಾನಂದ ಅಧ್ಯಯನ ಕೇಂದ್ರದ ಡಾ. ಮಂಜುನಾಥ್ ಭಟ್ಟ ಇದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸ್ವಾಗತಿಸಿದರು. ಯೋಗ ಕೇಂದ್ರದ ಸಂಯೋಜಕ ಹಾಗೂ ಕಾಲೇಜಿನ ದೈಹಿಕ ನಿರ್ದೇಶಕ ನವೀನ್ಚಂದ್ರ ವಂದಿಸಿದರು. ಕನ್ನಡ ಉಪನ್ಯಾಸಕಿ ವನಿತಾ ಶೆಟ್ಟಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.