
ಶಿರ್ವ: ಜೆನ್ ಝೀಗಳು ಪ್ರತಿಭಾವಂತರು. ಅಪಾರ ಶಕ್ತಿ, ಉತ್ಸಾಹವನ್ನು ಹೊಂದಿರುವ ಯುವಜನರು ಯಶಸ್ವಿ ಜೀವನ ನಡೆಸಬೇಕಾದರೆ ಶ್ರಮಪಡುವುದು ಅಗತ್ಯ. ಶ್ರಮವಿಲ್ಲದೆ ಪ್ರತಿಫಲ ಸಿಗಲಾರದು ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಟ್ರಸ್ಟ್ನ ಆಡಳಿತಾಧಿಕಾರಿ ಶ್ರೀಧರ್ ರಂಗನಾಥ ಪೈ ಹೇಳಿದರು.
ಇನ್ನಂಜೆ ಎಸ್.ವಿ.ಎಚ್.ಶಿಕ್ಷಣ ಸಂಸ್ಥೆಯಲ್ಲಿ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಬದುಕನ್ನು ನಾವು ಸರಿಯಾಗಿ ರೂಪಿಸಿಕೊಳ್ಳಬೇಕು. ನಮ್ಮ ಜೀವನ ಭತ್ತ ತುಂಬುವ ಚೀಲವಾಗಿರದೆ, ಭತ್ತವನ್ನು ಬೆಳೆಯುವ ಗದ್ದೆಯಾಗಬೇಕು. ಪ್ರಧಾನಿ ಅವರ ‘ವಿಕಸಿತ ಭಾರತ’ದ ನವಸಂಕಲ್ಪವನ್ನು ಪೂರ್ಣ ಮನೋಭಾವದಿಂದ ಕೈಗೊಳ್ಳಬೇಕು ಎಂದರು.
ಸೋದೆ ಎಜುಕೇಷನ್ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ರಾಧಾಕೃಷ್ಣ ಐತಾಳ್ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣದಲ್ಲಿ ಸಿಗಲಾರದ ಅನೇಕ ಹೊಸ ಸಂಗತಿಗಳನ್ನು ಈ ಶಿಬಿರಗಳಲ್ಲಿ ಕಲಿಯಲು ಸಾಧ್ಯ. ಎನ್ಎಸ್ಎಸ್ ಶಿಬಿರದ ಮೂಲ ಸಹಬಾಳ್ವೆ, ಭ್ರಾತೃತ್ವ, ಸರ್ವಾಂಗೀಣ ಪ್ರಗತಿ ಬಗ್ಗೆ ಕಲಿಯಬಹುದು ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಎಂ.ವಿಶ್ವನಾಥ್ ಪೈ, ಉದ್ಯಮಿ ನವೀನ್ ಅಮೀನ್, ಇನ್ನಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಎಸ್.ವಿ.ಎಚ್.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ದೇವಿದಾಸ್ ಎಸ್.ನಾಯ್ಕ, ವಿದ್ಯಾರ್ಥಿ ನಾಯಕರಾದ ರಂಜಿತ್, ಧೃತಿ ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಸುಚಿತ್ ಕೋಟ್ಯಾನ್ ಸ್ವಾಗತಿಸಿದರು. ರೇಖಾ ಎನ್.ಚಂದ್ರ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿನಿ ಮೇಘಾ ವಂದಿಸಿದರು. ರೋಶನಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.