ಕುಮಟಾ: ತಾಲ್ಲೂಕಿನ ಅಘನಾಶಿನಿ ನದಿ ಹಿನ್ನೀರು ಗಜನಿ ಪ್ರದೇಶದಲ್ಲಿ ಈಗ ರುಚಿಕರವಾದ ಬಗೆ ಬಗೆಯ ತಾಜಾ ಮೀನು ಸುಗ್ಗಿ ಆರಂಭಗೊಂಡಿದೆ. ಇನ್ನು 15 ದಿನ ಮೀನುಪ್ರಿಯರು ತಾಜಾ ಮೀನು ಖಾದ್ಯ ಸವಿಯಬಹುದಾಗಿದೆ.
ಉಪ್ಪು ನೀರಿನಲ್ಲೂ ಬೆಳೆಯುವ ‘ಕಗ್ಗ’ ಭತ್ತ ಬೆಳೆಯುವ ಈ ಗಜನಿ ಪ್ರದೇಶದಲ್ಲಿ ನೈಸರ್ಗಿಕ ಮೀನು ಎರಡನೇ ಬೆಳೆಯಾಗಿದೆ. ಸಾವಿರಾರು ಎಕರೆ ಹಿನ್ನೀರು ಗಜನಿಯಲ್ಲಿ ಮೀನು ಹಿಡಿದ ನಂತರ ಕೆಲವೆಡೆ ಭತ್ತದ ಕೃಷಿ ನಡೆಸಲಾಗುತ್ತಿದೆ. ಭತ್ತವನ್ನು ಕಟಾವು ಮಾಡಿದ ನಂತರ ಗಜನಿಯಲ್ಲಿ ಉಳಿಯುವ ಭತ್ತದ ಸಸಿಯ ಬುಡ ಮೀನು ಹಾಗೂ ಸಿಗಡಿಗೆ ಅತ್ಯುತ್ತಮ ಆಹಾರವಾಗಿದೆ.
ಇಲ್ಲಿ ಅತ್ಯುತ್ತಮ ಗುಣಮಟ್ಟದ ಮೀನುಗಳಾದ ಕುರ್ಡೆ, ಕೆಂಸ, ಕಾಗಳಸಿ, ನೋಗಲಾ, ಬೈಗೆ, ಕಾಯಿಶೆಟ್ಲಿ (ಟೈಗರ್ ಫ್ರಾಣ್ಸ್), ಬಿಳಿ ಶೆಟ್ಲಿ ( ವೈಟ್ ಫ್ರಾಸನ್), ಕೋಳೆ ಶೆಟ್ಲಿ, ಏಡಿ ಮುಂತಾದವು ವಿಶೇಷ. ಕುರ್ಡೆ ಮೀನು ಪ್ರತಿ ಕೆ.ಜಿಗೆ ₹ 500, ಕಾಗಳಸಿ ₹ 300, ಗುರ್ಕಾ, ಕೊಕ್ಕರಾ, ಬೈಗೆ ₹ 200, ಟೈಗರ್ ಫ್ರಾನ್ಸ್ ₹ 800, ಬಿಳಿ ಶೆಟ್ಲಿ ₹ 400ಗೆ ಮಾರಾಟವಾಗುತ್ತಿದೆ.
ಮೀನು ಹಿಡಿಯುವ ಮಾಸೂರು, ಮಾಣಿಕಟ್ಟಾ ಗಜನಿಯಲ್ಲಿ ಮೀನು ಹಿಡಿಯುವ ಸಮಯವನ್ನು ಫೋನ್ ಮಾಡಿ ತಿಳಿದುಕೊಂಡು ಜನರು ಧಾವಿಸುತ್ತಾರೆ. ಸ್ಥಳೀಯರಿಗೆ ಮಾರಾಟವಾಗಿ ಉಳಿದ ಹೆಚ್ಚಿನ ಪ್ರಮಾಣದ ಮೀನುಗಳನ್ನು ಗೋವಾಕ್ಕೆ ಕಳುಹಿಸಲಾಗುತ್ತದೆ. ಗಜನಿಯ ತಾಜಾ ಮೀನು ರುಚಿ ಅರಸಿ ಶಿರಸಿ, ಅಂಕೋಲಾ, ಭಟ್ಕಳದಿಂದಲೂ ಜನರು ಬರುವುದು ವಿಶೇಷ.
–ಎಂ.ಜಿ.ನಾಯ್ಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.