ADVERTISEMENT

ಇಲ್ಲಿ ದೇವರಿಗೆ ಮದ್ಯದ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 5:00 IST
Last Updated 19 ಮಾರ್ಚ್ 2012, 5:00 IST

ಕಾರವಾರ: ಜಾತ್ರೆ, ಉತ್ಸವದ ಸಂದರ್ಭದಲ್ಲಿ ದೇವರಿಗೆ ನೀರು, ಹಾಲು ಹಾಗೂ ವಿವಿಧ ಧಾನ್ಯಗಳಿಂದ ಅಭಿಷೇಕ ಮಾಡುವುದು ಸಾಮಾನ್ಯ. ಆದರೆ, ಇಲ್ಲಿಯ ಕೋಡಿಬಾಗದ ಖಾಪ್ರಿ ದೇವರಿಗೆ ಜಾತ್ರೆಯ ಸಂದರ್ಭ ದಲ್ಲಿ ಮದ್ಯದ ಅಭಿಷೇಕ ಮಾಡುವ ವಿಶಿಷ್ಟವಾದ ಸಂಪ್ರದಾಯ ತಲೆ ತಲಾಂತರಗಳಿಂದ ನಡೆದು ಬಂದಿದೆ.

ಕಾಳಿ ಸಂಗಮದಲ್ಲಿರುವ ಖಾಪ್ರಿ ದೇವರ ಜಾತ್ರೆ ಭಾನುವಾರ ಸಾವಿ ರಾರು ಭಕ್ತರ ಮಧ್ಯೆ ಸಂಭ್ರಮದಿಂದ ನಡೆಯಿತು. ದೇವಸ್ಥಾನದ ಅರ್ಚಕರು ಮದ್ಯ, ಸಿಗರೇಟು, ಮೇಣದ ಬತ್ತಿ ಯನ್ನು ಹಚ್ಚಿ ಪೂಜೆ ಸಲ್ಲಿಸಿದ ನಂತರ ಜಾತ್ರೆಗೆ ಚಾಲನೆ ದೊರೆಯಿತು. ಹೂ, ಹಣ್ಣು ಕಾಯಿಯೊಂದಿಗೆ ಭಕ್ತರು ದೇವರಿಗೆ ಮದ್ಯ ಅರ್ಪಿಸಿ ಕೃತಾರ್ಥರಾ ದರು.  ವಿವಿಧ ಬ್ರಾಂಡ್‌ನ ಮದ್ಯವನ್ನು ತಂದು ಭಕ್ತರು ದೇವರಿಗೆ ಸಲ್ಲಿಸಿದರು.

ಭಕ್ತರು ದೇವರಿಗೆ ಅರ್ಪಿಸಿದ ತೆಂಗಿನಕಾಯಿ. ಬಾಳೆಹಣ್ಣು, ಅಕ್ಕಿ, ದವಸ-ಧಾನ್ಯಗಳಿಂದಲೇ ಅಡುಗೆ ತಯಾರಿಸಿ ಜಾತ್ರೆಗೆ ಬಂದ ಭಕ್ತರಿಗೆ ಅನ್ನಸಂರ್ಪಣೆ ಮಾಡಲಾಯಿತು. ತುಲಾಭಾರ ಸೇವೆಯೂ ನಡೆಯಿತು. ಇಲ್ಲಿಗೆ ಹಿಂದುಗಳಷ್ಟೇ ಅಲ್ಲ ಮುಸ್ಲಿಮ್, ಕ್ರಿಶ್ಚಿಯನ್ನರು ಬರುತ್ತಿದ್ದು ಇದೊಂದು ಭಾವೈಕ್ಯದ ಜಾತ್ರೆ ಆಗಿದೆ.

ಕೋಡಿಬಾಗದ ಪುರ್ಸಪ್ಪ ಮನೆತನದ ದೇವರ ಮೂಲ ಆಪ್ರಿಕಾ. ಅದಕ್ಕಾಗಿಯೇ ಇದಕ್ಕೆ ಖಾಪ್ರಿ ಎನ್ನುವ ಹೆಸರು ಬಂದಿದೆ ಎನ್ನುವುದು ಪ್ರತೀತಿ. ಪ್ರತಿನಿತ್ಯ ಅಲ್ಲದೇ ಭಾನುವಾರ ಹಾಗೂ ಬುಧವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಸಂಕಷ್ಟದಲ್ಲಿ ಸಿಲುಕಿದ ಸಂದರ್ಭ ದಲ್ಲಿ ಖಾಪ್ರಿ ದೇವರನ್ನು ನೆನೆದರೆ ಅಪಾಯದಿಂದ ಪಾರಾಗುತ್ತಾರೆ ಎನ್ನುವುದು ಭಕ್ತರ ನಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.