ADVERTISEMENT

ಉಳವಿ ಚೆನ್ನಬಸವೇಶ್ವರರ ಮಹಾರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 9:00 IST
Last Updated 8 ಫೆಬ್ರುವರಿ 2012, 9:00 IST

ದಾಂಡೇಲಿ: ಶರಣ ಸಂಸ್ಕೃತಿ ಮೂಲಕ ನಾಡಿನಾದ್ಯಂತ ವಿಶೇಷ ಪ್ರಸಿದ್ದಿ ಪಡೆ ದಿರುವ ಶ್ರೀಕ್ಷೇತ್ರ ಉಳವಿಯಲ್ಲಿ ಇದೀಗ ರಥೋತ್ಸವದ ಸಂಭ್ರಮವಿದೆ. ದೇವ ಸ್ಥಾನದ ಆವರಣ ಸುತ್ತ ಹಬ್ಬಿರುವ ನಿತ್ಯ ಹರಿದ್ವರ್ಣ ಕಾಡುಗಳ ನಿಸರ್ಗ ವೈಭವದ ನಡುವೆ ಸೇರಿರುವ ಲಕ್ಷಗಟ್ಟಲೆ ಭಕ್ತರು ಜಾತ್ರೆಯ ಸಂಭ್ರಮದಲ್ಲಿದ್ದಾರೆ.

ಷಟ್‌ಸ್ಥಲ ಚಕ್ರವರ್ತಿ ಚೆನ್ನಬಸವಣ್ಣ ನವರ ಮಹಾಮಂದಿರ 12ನೇ ಶತ ಮಾನದಲ್ಲಿ ಕಲ್ಯಾಣ ಕ್ರಾಂತಿಯ ಪ್ರತೀಕ ವಾಗಿ ನಿಂತಿದೆ. ಅಸಂಖ್ಯಾತ ಅನು ಯಾಯಿಗಳ ಭಕ್ತಿ, ಗೌರವದ ಸಂಕೇತ ವಾಗಿದೆ. ಶ್ರೀಕ್ಷೇತ್ರದಲ್ಲಿ ಚನ್ನಬಸವಣ್ಣ ಸೇರಿದಂತೆ ಹಲವು ಶರಣರು ಜೀವಂತ ಸಮಾಧಿಯಾದರು ಎಂಬ ಪ್ರತೀತಿ ಇದೆ. ತಪೋನಿಧಿಗಳಿಗೆ ಭಕ್ತಿ ಸಮರ್ಪಣೆ ಮಾಡಲು ನಾಡಿನ ವಿವಿಧೆಡೆಯಿಂದ ಭಕ್ತರು ಹರಿದು ಬರುತ್ತಿದ್ದಾರೆ. ಶ್ರೀಕ್ಷೇತ್ರದಲ್ಲಿ ಮಹಾಸಮಾಧಿಗೆ ತ್ರಿಕಾಲ ಪೂಜೆ, ವಿಶೇಷ ಅಭಿಷೇಕಗಳು ನಡೆಯ ಲಿವೆ.

ದೇವಸ್ಥಾನದ ಹೊರಗೆ ಎತ್ತ ನೋಡಿ ದರೂ ಶಿವಲಾವಣ್ಯ ಹೊತ್ತುನಿಂತಿರುವ ಬಿಲ್ವವೃಕ್ಷಗಳಿವೆ. ಸಮೀಪದಲ್ಲಿಯೇ ಶರಣರ ಜೀವನಕ್ಕೆ ಸಂಬಂಧಿಸಿದಂತೆ ಇತಿಹಾಸ ಪ್ರಸಿದ್ಧ ಮಹಾಮನೆ, ಗವಿಗಳು, ಮಂಟಪಗಳಿವೆ. ಹರಳಯ್ಯ ಚಿಲುಮೆ, ಅಕ್ಕನಾಗಮ್ಮ ಅನುಷ್ಠಾನಗೈದ ಗವಿಗಳಿವೆ. ಈ ಗವಿಯನ್ನು ದಾಟಿ ಹೋದರೆ ವಿಭೂತಿ ಕಣಜ ಸಿಗುವುದು. ಬಿಳಿ ಕಲ್ಲಿನ ಹುತ್ತಗಳಿರುವ ಆಕಳಗವಿ ಸಿಗುತ್ತದೆ.
 
ರುದ್ರಾಕ್ಷಿಮಂಟಪದ ಪುಟ್ಟ ಗುಹೆ ಇವೆ.. ಗುಹೆಯ ಮೇಲ್ಛಾವಣಿಯ ಕಲ್ಲುಗಳು ರುದ್ರಾಕ್ಷಿಯ ಆಕಾರ ಹೊಂದಿವೆ. ಇಲ್ಲಿ ಶಿವಶರಣರು ಪೂಜೆ ಗೈದಿದ್ದರು ಎನ್ನಲಾಗುತ್ತಿದೆ. ಬಿಜ್ಜಳನ ಸೈನ್ಯ ತಮ್ಮ ಅನುಷ್ಠಾನಕ್ಕೆ ಆಗಬಹು ದಾದ ತೊಂದರೆಯಿಂದ ಪಾರಾಗಲು ಗುಹೆಗಳ ಮೊರೆ ಹೋಗಿದ್ದರು ಎನ್ನಲಾಗಿದೆ. ಶಿವಶರಣರು ಇಲ್ಲಿಯೇ ಕೆಲಕಾಲ ಅನುಭಾವಗೋಷ್ಠಿ ನಡೆಸಿದರು ಎನ್ನಲಾಗುತ್ತಿದೆ.

ಕರ್ನಾಟಕ ಸೇರಿದಂತೆ ನೆರೆಯ ಮಹಾ ರಾಷ್ಟ್ರ ರಾಜ್ಯಗಳಿಂದ ಲಕ್ಷಗಟ್ಟಲೆ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವರು. ಅವರೆಲ್ಲ ಚಕ್ಕಡಿ, ಟ್ರ್ಯಾಕ್ಟರ್, ಕಾಲ್ನಡುಗೆ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸುವರು. ರಾಜ್ಯದ ಧಾರವಾಡ, ವಿಜಾಪುರ, ಬೆಳಗಾವಿ, ಹಾವೇರಿ, ಹಾಗೂ ದಾವಣ ಗೆರೆ ಜಿಲ್ಲೆಗಳಿಂದ ಭಕ್ತರು ಭಕ್ತಿಯಿಂದ ಪಾಲ್ಗೊಳ್ಳುವರು. ಹನ್ನೊಂದು ದಿನಗಳ ಜಾತ್ರಾ ಮಹೋತ್ಸವದಲ್ಲಿ ಭಕ್ತರು, ಉರುಳುಸೇವೆ, ಅಭಿಷೇಕ, ತುಲಾಭಾರ, ದೀಡ್ ನಮಸ್ಕಾರನಂತಹ ಭಕ್ತಿ ಸೇವೆಗಳನ್ನು ಸಲ್ಲಿಸುವರು.

ಜಾತ್ರಾ ಮಹೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಲ್ಲದೆ ಸ್ಥಳೀಯರ ನೆರವಿನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾಳೆ ನಡೆಯುವ ಮಹಾ ರಥೋತ್ಸವ ದಲ್ಲಿ ಸುಮಾರು 2 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಭಕ್ತರ ಅವಶ್ಯಕತೆಗೆ ತಕ್ಕಂತೆ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ.

ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನ ಆಡಳಿತ ಮಂಡಳಿಯು ವಿವಿಧ ಧಾರ್ಮಿಕ ಮತ್ತು ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ಆಯೋಜಿ ಸಿದೆ. ಬಸವೇಶ್ವರ ಭವನಕ್ಕೆ ಅಡಿಗಲ್ಲು, ಯಾತ್ರಿ ನಿವಾಸದ ಉದ್ಘಾಟನೆ, ಪ್ರೌಢ ಶಾಲೆ ಮೊದಲ ಮಹಡಿ ಕಟ್ಟಡಕ್ಕೆ ಶಂಕುಸ್ಥಾಪನೆ, ಸಾಂಸ್ಕೃತಿಕ ಭವನದ ಅಡ್ಡಿಗಲ್ಲು ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದೇ 8ರಂದು ಸಂಜೆ 4 ಗಂಟೆಗ ಹಳ್ಯಾಳ ಜೋಯಿಡಾ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ಮಹಾರಥೋತ್ಸವ ನಡೆಯಲಿದೆ. ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಶಾಸಕ ಎಸ್. ಎಲ್. ಘೋಟ್ನೇಕರ, ಮತ್ತು ಮಾಜಿ ಸಂಸದ ಮಂಜುನಾಥ ಕುನ್ನೂರ ಭಾಗ ವಹಿಸುವರು. ಯಾತ್ರಾರ್ಥಿಗಳ ಅನು ಕೂಲಕ್ಕಾಗಿ ಜಿಲ್ಲಾಡಳಿತವು ಶ್ರೀಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ವಿಶೇಷ ಆದ್ಯತೆ ನೀಡಿದೆ.
 
ಕುಡಿಯುವ ನೀರು, ಜಾನುವಾರುಗಳ ಆರೋಗ್ಯ ಚಿಕಿತ್ಸೆ, ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ, ರಸ್ತೆ ದುರಸ್ತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಿದೆ. 9ರಂದು ಬಯಲು ಕುಸ್ತಿ ಪಂದ್ಯ ಆಯೋಜಿಸಲಾಗಿದೆ. 10ರಂದು ರಾತ್ರಿ ಭಕ್ತರು ಓಕುಳಿ ರಥ ಎಳೆಯುವುದ ರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.