ADVERTISEMENT

ಊರುಕೇರಿ :ಕೊಡ ನೀರಿಗಾಗಿ ತಪ್ಪದ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 9:55 IST
Last Updated 14 ಏಪ್ರಿಲ್ 2012, 9:55 IST

ಕುಮಟಾ: ಕುಡಿಯುವ ನೀರಿನ ವಿಪರೀತ ಸಮಸ್ಯೆ ಇರುವ ತಾಲ್ಲೂಕಿನ ವಾಲಗಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಉದ್ದೇಶದಿಂದ  ನಿರ್ಮಿಸಿದ ತೆರೆದ ಬಾವಿಯಲ್ಲಿ ಉತ್ತಮ ನೀರಿದ್ದರೂ ಅದರ ಮೊತ್ತವನ್ನು ಬೇರೆ ಯೋಜನೆಗೆ ವರ್ಗಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ.

`ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಕುಡಿಯುವ ನೀರಿನ ಕನಿಷ್ಠ ಅಗತ್ಯ ಪೂರೈಕೆ ಕಾರ್ಯಕ್ರಮದಡಿ ತಾಲ್ಲೂಕಿನ ಊರಕೇರಿಯ ಕೆಳಗಿನಕೇರಿ, ಗುಮ್ಮನಗುಡಿಗೆ, ನಡುದಿಂಡೆ ಹರಿಜನಕೇರಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಗಾಗಿ 2006 ರಲ್ಲಿ  2 ಲಕ್ಷ ರೂ. ಮಂಜೂರಾಗಿತ್ತು. ಈ ಯೋಜನೆಗಾಗಿ ನಾರಾಯಣ ನಾಯ್ಕ ಎನ್ನುವವರು ತಮ್ಮ ಮಾಲ್ಕಿ ಜಾಗದಲ್ಲಿ ಸರ್ಕಾರಕ್ಕೆ ಕಿೊಂದು ಗುಂಟೆ ಜಾಗವನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದರು. ಯೋಜನೆಗಾಗಿ 48 ಸಾವಿರ ರೂಪಾಯಿ ವೆಚ್ಚದಲ್ಲಿ ಬಾವಿ ನಿರ್ಮಿಸಲಾಗಿತ್ತು.
ಆದರೆ ಆಗಿನ ಸ್ಥಳೀಯ ಜಿ.ಪಂ. ಸದಸ್ಯರ ಸೂಚನೆಯ ಮೇರೆಗೆ ಆ ಕಾಮಗಾರಿಯನ್ನು ಅಲ್ಲಿಗೇ ಸ್ಥಗಿತಗೊಳಿಸಿ, ಅದರ ಉಳಿದ ಮೊತ್ತ  1.52 ಲಕ್ಷ ರೂಪಾಯಿಯನ್ನು ಕೂಜಳ್ಳಿ ಪಂಚಾಯಿತಿಯ ಕೆಂಗೇರಿ- ಅಡಿಗುಂಡಿ ಹರಿಜನ ಕೇರಿಯ ತೆರೆದ ಬಾವಿ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ~ ಎಂದು ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ  ಎಂಜಿನಿಯರ್ ಆರ್.ಎನ್. ನಾಯ್ಕ ತಿಳಿಸಿದ್ದಾರೆ.

`ನಮ್ಮ ಕೆಳಗಿನಕೇರಿ, ಗುಮ್ಮನಗುಡಿಗೆ, ನಡುದಿಂಡೆ  ಭಾಗಕ್ಕೆ  ನೀರು ಪೂರೈಕೆ ಮಾಡಲು 2006 ರಲ್ಲಿ ಮಂಜೂರಾದ ಕಾಮಗಾರಿಯಲ್ಲಿ ಬಾವಿ ಮಾತ್ರ ತೆಗೆಯಲಾಗಿದೆ. ಸುಮಾರು 20 ಅಡಿ ಅಗಲದ ಬಾವಿಯಲ್ಲಿ ಏಪ್ರಿಲ್ ತಿಂಗಳಲ್ಲಿಯೇ ಸುಮಾರು 15 ಅಡಿಯಷ್ಟು ಉತ್ತಮ ನೀರಿದೆ. ಆದರೆ ಬಾವಿಗೆ ಪಂಪು, ಪೈಪ್‌ಲೈನ್ ಅಳವಡಿಸದೇ ಅದನ್ನು ಅ್ಲ್ಲಲಿಯೇ ಸ್ಥಗಿತಗೊಳಿಸಿ ಅದರ ಬಾಕಿ ಮೊತ್ತವನ್ನು ಬೇರೆಡೆ ವರ್ಗಾಯಿಸಿದ್ದು ಎಷ್ಟು ಸರಿ? ಇದರಿಂದ ನಮ್ಮ ಊರಿನ ನಾರಾಯಣ ನಾಯ್ಕ ಎನ್ನುವವರು ಜನರಿಗೆ ನೀರು ದೊರೆಯಲಿ ಎಂದು ಸರಕಾರಕ್ಕೆ ಬರೆದುಕೊಟ್ಟ  ಒಂದು ಗುಂಟೆ ಜಾಗದ ಪ್ರಯೋಜನವೂ ಆಗಿಲ್ಲ. ಈ ಭಾಗದ ಮಹಿಳೆಯರು ಒಂದು ಕೊಡ ನೀರಿಗಾಗಿ ಇಡೀ ದಿನ ಪರದಾಡುತ್ತಿದ್ದಾರೆ. ನಾವು ಈ ಹಿಂದೆ ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ನ್ಯಾಯ ಕೇಳಿ ತಹಶೀಲ್ದಾರ ಅವರಿಗೂ ಮನವಿ ಸಲ್ಲಿಸಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ, ಈ ಕಾಮಗಾರಿಯನ್ನು ಪುನ: ಕೈಗೆತ್ತಿಕೊಂಡು ಇಲ್ಲಿಯ ನೀರನ್ನು ನೇರವಾಗಿ ಕೆಳಗಿನಕೇರಿ, ಗುಮ್ಮನಗುಡಿಗೆ, ನಡುದಿಂಡೆ ಪ್ರದೇಶಕ್ಕೆ ಪೂರೈಕೆ ಮಾಡುವಂತಾಗಬೇಕು~ ಎಂದು ಸ್ತ್ರೀ ಶಕ್ತಿ ಸಂಘಗಳ ತಾಲ್ಲೂಕು ಒಕ್ಕೂಟ  ಸದಸ್ಯೆ ಹಾಗೂ ಊರಿಕೇರಿಯ  ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಗೀತಾಂಜಲಿ ಮುಕ್ರಿ ತಿಳಿಸಿದ್ದಾರೆ.

`ಸ್ಥಳೀಯ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಗೀತಾಂಜಲಿ ಮುಕ್ರಿ ಅವರು ನೀಡಿದ ಮನವಿ ಆಧರಿಸಿ ಸಮಸ್ಯೆ ಬಗ್ಗೆ ಕಾರಣ ಕೇಳಿ ಬರೆದ ಪತ್ರದಲ್ಲಿ ಜಿಪಂ ಎಂಜಿನಿಯರಿಂಗ್ ವಿಭಾಗದವರು ಕಾಮಗಾರಿ ಬದಲಾವಣೆಗೆ ಕಾರಣ ನಮೂದಿಸಿಲ್ಲ. ಬಾವಿಯಲ್ಲಿ ನೀರಿದ್ದರೂ  ಕಾಮಗಾರಿ ರದ್ದುಗೊಳಿಸಿ ಅದರ ಹಣ ಬೇರೆಡೆ ವರ್ಗಾಯಿಸಿದ್ದು ಮಾತ್ರ ಸಮಂಜಸವಲ್ಲ~ ಎಂದು ತಹಶೀಲ್ದಾರ ವಿ.ಬಿ. ಫರ್ನಾಂಡಿಸ್ ತಿಳಿಸಿದ್ದಾರೆ.

ಗ್ರಾಮಸ್ಥರಾದ ದೇವಿ ವಾಸು ಮುಕ್ರಿ,  ಪ್ರಕಾಶ ಜಟ್ಟಿ ಮುಕ್ರಿ, ದತ್ತಾತ್ರಯ ದೇಶಭಂಡಾರಿ, ಹೊಸಬಯ್ಯ ನಾಯ್ಕ, ಚಂದ್ರಕಲಾ ಹನುಮಂತ ನಾಯ್ಕ, ಸವಿತಾ ನಾರಾಯಣ ಮುಕ್ರಿ, ಲಕ್ಷ್ಮಿ ನಾರಾಯಣ ಮುಕ್ರಿಮೊದಲಾದವರು ನೀರಿನ ಸಮಸ್ಯೆ ತೋಡಿಕೊಂಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.