ಕಾರವಾರ: ಆತನಿಗೆ ತನ್ನವರು ಎನ್ನುವರು ಯಾರೂ ಇಲ್ಲ. ಇಲ್ಲಿಯ ಜಿಲ್ಲಾ ಆಸ್ಪತ್ರೆಯ 215ನೇ ವಾರ್ಡ್ನಲ್ಲಿ ಅಕ್ಕಪಕ್ಕದಲ್ಲಿರುವ ಬೆಡ್ಗಳೇ ಅವನಿಗೆ ಸಂಗಾತಿಗಳು. ಎಚ್ಐವಿ ಸೋಂಕಿತ ಎನ್ನುವ ಕಾರಣಕ್ಕೆ ಯಾರೂ ಆತನ ಹತ್ತಿರ ಬರುತ್ತಿರಲಿಲ್ಲ. ಆಸ್ಪತ್ರೆಯೊಗಳಗೆ ಆತ ಅಕ್ಷರಶಃ ಅನಾಥನಾಗಿದ್ದ.
ಕೇರಳ ಮೂಲದ ಮಣಿ ಎಸ್. ಪಿಳ್ಳೆ (56) ಕೆಲ ವರ್ಷಗಳ ಹಿಂದೆ ಕುಮಟಾಕ್ಕೆ ಬಂದು ಅಲ್ಲಿಯ ಹೊಟೇಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದು ದಿನ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಈತನ ಕಾಲಿಗೆ ಗಾಯವಾಗಿತ್ತು. ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗಾಗಿ ದಾಖಲಾ ಗಿದ್ದರು. ಅಲ್ಲಿ ರಕ್ತತಪಾಸಣೆ ನಡೆಸಿದ್ದ ಸಂದರ್ಭದಲ್ಲಿ ಪಿಳ್ಳೆಗೆ ಎಚ್ಐವಿ ಸೋಂಕು ಇರುವುದು ಗೊತ್ತಾಗಿದೆ.
ಎಚ್ಐವಿ ಸೋಂಕು ಇರುವ ಹಿನ್ನೆಲೆಯಲ್ಲಿ ಪಿಳ್ಳೆಗೆ ಹೆಚ್ಚಿನ ಚಿಕಿತ್ಸೆ ಗಾಗಿ ತಾಲ್ಲೂಕು ಆಸ್ಪತೆಯಿಂದ ಇಲ್ಲಿಯ ಜಿಲ್ಲಾ ಆಸ್ಪತ್ರೆಗೆ ಕಳಹಿಸಲಾ ಗಿತ್ತು. ಒಂದು ವಾರದ ಹಿಂದೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಪಿಳ್ಳೆಗೆ ಐದು ದಿನಗಳಿಂದ ಊಟ. ಚಹಾ ಏನೂ ನೀಡಿರಲಿಲ್ಲ. ಈ ವಿಷಯ ತಿಳಿದ ಕೆಡಿಡಿಸಿ ಸಂಸ್ಥೆಯ ಮಂಜುಳಾ ನಾಯ್ಕ ಅವರು ಪಿಳ್ಳೆಯನ್ನು ನೋಡಿ ವಿಚಾರಿಸಿದಾಗ ಆತ ಘಟನೆಯನ್ನು ವಿವರಿಸಿದ್ದಾನೆ.
ಮಂಜುಳಾ ಈ ವಿಷಯವನ್ನು ಜನಶಕ್ತಿ ವೇದಿಕೆಯ ಪದಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವೇದಿಕೆ ಅಧ್ಯಕ್ಷ ಮಾಧವ ನಾಯಕ ಬುಧವಾರ ಆಸ್ಪತ್ರೆಗೆ ಬಂದು ಪಿಳ್ಳೆ ಅವರ ಆರೋಗ್ಯ ವಿಚಾರಿಸಿ, ಅವರನ್ನು ಉಪಚರಿಸಲು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಮಾಡುತ್ತಿರುವುದನ್ನು ಕಂಡು ತಾಲ್ಲೂ ಕಿನ ಶಿರವಾಡದಲ್ಲಿರುವ ಕಮ್ಯೂನಿಟಿ ಚರ್ಚ್ ಸೆಂಟರ್ಗೆ ದಾಖಲಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
`ಐಎಚ್ವಿ ಸೋಂಕು ಉಲ್ಬಣಿಸಿ ಪಿಳ್ಳೆ ಮೃತಪಟ್ಟರೆ ಶವಸಂಸ್ಕಾರ ಜವಾಬ್ದಾರಿ ಹೊರಲು ನಾನು ಸಿದ್ಧವಾ ಗಿದ್ದೇನೆ~ ಎಂದು ನಾಯಕ ಅವರು ಕಮ್ಯೂನಿಟಿ ಸೆಂಟರ್ಗೆ ಲಿಖಿತ ಹೇಳಿಕೆ ನೀಡಿದ ನಂತರವೇ ಪಿಳ್ಳೆಗೆ ಅಲ್ಲಿ ಪ್ರವೇಶ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.