ಹೊನ್ನಾವರ: ಭಾನುವಾರ ಇಲ್ಲಿ ನಡೆದ ಭಟ್ಕಳ ಉಪವಿಭಾಗ ಮಟ್ಟದ ಕರಾವಳಿ ಉತ್ಸವದಲ್ಲಿ ಪಶುಸಂಗೋಪನಾ ಇಲಾಖೆ, ಹೊನ್ನಾವರ ಉತ್ಸವ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನ ಜನರ ಗಮನ ಸೆಳೆಯಿತು.
ವಿವಿಧ ತಳಿಯ ಶ್ವಾನಗಳೊಂದಿಗೆ ಅವುಗಳ ಮಾಲೀಕರು ಕಾರ್ಯಕ್ರಮ ಆರಂಭವಾಗುವ ಸಾಕಷ್ಟು ಮೊದಲೇ ಸ್ಥಳಕ್ಕೆ ಆಗಮಿಸಿದ್ದರು. ಉದ್ಘಾಟನಾ ಕಾರ್ಯಕ್ರಮ ನಿಗದಿತ ಅವಧಿಗಿಂತ ಒಂದು ತಾಸು ತಡವಾಗಿ ನಡೆಯಿತು. ಶಾಸಕ ಮಂಕಾಳ ವೈದ್ಯ ಬೆಳಿಗ್ಗೆ ಶ್ವಾನ ಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ಬೆಳಗಿನ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ವರಚಿತ ಕವನಗಳ ವಾಚನ, ಮಹಿಳೆಯರಿಗಾಗಿ ರಂಗೋಲಿ, ಕೇಶ ವಿನ್ಯಾಸ, ಅಡುಗೆ ಹಾಗೂ ಉಡುಗೆ ಸ್ಪರ್ಧೆಗಳು ನಡೆದವು. ಪುರುಷರು ಕಬಡ್ಡಿ, ಹಗ್ಗಜಗ್ಗಾಟ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ತೋಟಗಾರಿಕೆ, ಕೃಷಿ, ಶಿಕ್ಷಣ, ಅರಣ್ಯ, ಸಮಾಜ ಕಲ್ಯಾಣ, ಮೀನುಗಾರಿಕೆ ಇಲಾಖೆಗಳು ಹಾಗೂ ಸ್ತ್ರೀ ಶಕ್ತಿ ಗುಂಪುಗಳಿಂದ ವಸ್ತು ಹಾಗೂ ಮಾಹಿತಿ ಪುಸ್ತಕಗಳ ಪ್ರದರ್ಶನ ನಡೆಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ ಶೆಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಉಲ್ಲಾಸ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ.ಹೆಗಡೆ, ಪಟ್ಟಣ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ಶರಾವತಿ ಮೇಸ್ತ, ಉಪವಿಭಾಗಾಧಿಕಾರಿ ಎಂ.ಎನ್.ಮಂಜುನಾಥ, ತಹಶೀಲ್ದಾರ ವಿ.ಆರ್.ಗೌಡ, ಪಿಎಸ್ಐ ಆನಂದಮೂರ್ತಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.