ADVERTISEMENT

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ 18ರಿಂದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 8:13 IST
Last Updated 7 ಜನವರಿ 2014, 8:13 IST

ಹೊನ್ನಾವರ: ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಗೆ ಅನುಪಮ ಸೇವೆ ಸಲ್ಲಿಸಿರುವ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಸಂಘಟನೆಯಲ್ಲಿ, ವಿವಿಧ ಕಲಾಪ್ರಕಾರಗಳಿಗೆ ವೇದಿಕೆ ಕಲ್ಪಿಸಿರುವ, ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ–5’ ಗುಣವಂತೆಯ ಯಕ್ಷಾಂಗಣದಲ್ಲಿ ಜ. 18ರಿಂದ 22ರ ವರೆಗೆ 5 ದಿನಗಳ ಕಾಲ ನಡೆಯಲಿದೆ.

ನಾಟ್ಯೋತ್ಸವದ ಸಂದರ್ಭದಲ್ಲಿ ಕೆರೆಮನೆ ಶಿವರಾಮ ಹೆಗಡೆ ಮತ್ತು ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ನಾಟ್ಯೋತ್ಸವ ಸನ್ಮಾನ, ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರದ 80ರ ಸಂಭ್ರಮ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದ ಕುರಿತು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಹಾಗೂ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ  ಪತ್ರಿಕಾಗೋಷ್ಠಿಯಲ್ಲಿ  ವಿವರ ನೀಡಿದರು.

18ರಂದು ಸಂಜೆ 4.30ಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲೇಪುರಂ ವೆಂಕಟೇಶ ನಾಟ್ಯೋತ್ಸವದ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಸಂಸದ ಅನಂತಕುಮಾರ ಹೆಗಡೆ, ಶಾಸಕ ಮಂಕಾಳ ಎಸ್.ವೈದ್ಯ, ಜಿಲ್ಲಾಧಿಕಾರಿ ಇಮ್‌ಕೋಂಗ್ಲಾ ಜಮೀರ್, ಎಸ್್್ಪಿ ಆರ್.ದಿಲೀಪ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಭಟ್ಟ, ಸಾಹಿತಿ ಎನ್.ಪಿ.ಭಟ್ಟ, ‘ಮಯೂರ’ ಸಹಾಯಕ ಸಂಪಾದಕಿ ಡಾ.ಆರ್.ಪೂರ್ಣಿಮಾ,ಸಾಹಿತಿ ಬಿ.ಎಸ್.ತಲ್ವಾಡಿ, ಪತ್ರಕರ್ತರಾದ ಗಂಗಾಧರ ಹಿರೇಗುತ್ತಿ, ಕೃಷ್ಣಮೂರ್ತಿ ಹೆಬ್ಬಾರ, ಶಂಭು ಗೌಡ ಅಡಿಮನೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಹಿತಿ ಜಿ.ಎಸ್.ಭಟ್ಟ ಮೈಸೂರು ಅಭಿನಂದನಾ ನುಡಿಗಳನ್ನಾಡುವರು.

ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ಅಭಿಜ್ಞಾನ ತಂಡದಿಂದ ಪುರುಷ ಸೂಕ್ತ–ಆಧುನಿಕ ನೃತ್ಯ ನಾಟಕ, ರಷ್ಯಾದ ಉಕ್ರೇನ್‌ನ ಗನ್ನಾ ಸ್ಮಿರ್ನೋವಾ ಅವರಿಂದ ಭರತನಾಟ್ಯ, ಆರ್.ದಿಲೀಪ್‌ ಮತ್ತು ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಅವರಿಂದ ಮೃದಂಗ ಮತ್ತು ತಬಲಾ ಜುಗಲ್ಬಂದಿ, ಬೆಂಗಳೂರಿನ ನಾಟ್ಯ ಇನ್‌ಸ್ಟಿಟ್ಯೂಟ್ ಕಲಾವಿದರಿಂದ ಸಾರೆ ಜಹಾಂಸೆ ಅಚ್ಚಾ ಬ್ಯಾಲೆ ನಡೆಯುವುದು.

19ರಂದು ಬೆಳಿಗ್ಗೆ 10.30ಕ್ಕೆ ಯಕ್ಷಗಾನ, ಕರ್ನಾಟಕಿ, ಹಿಂದೂಸ್ಥಾನಿ ಸಂಗೀತ ಸಂಪ್ರದಾಯಗಳ ಕುರಿತ ಸಂವಾದ, ಸಂಜೆ 6ರಿಂದ  ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

20ರಂದು ಬೆಳಿಗ್ಗೆ 10.30ಕ್ಕೆ ‘ಶ್ರೀ ಇಡಗುಂಜಿ ಮೇಳ 80 ಸಿದ್ಧಿ–ಸಾಧನೆ’ ಗೋಷ್ಠಿ,
ಸಂಜೆ 6ಕ್ಕೆ ಪದ್ಮಶ್ರೀ ಪಂ.ಸತೀಶ್ ವ್ಯಾಸ್ ಮುಂಬೈ ಅವರಿಂದ ಸಂತೂರ್ ವಾದನ, ಉಸ್ತಾದ್ ಫಜಲ್ ಖುರೇಷಿ ಮುಂಬೈ ಅವರಿಂದ ತಬಲಾ ಸಾಥ್, ವಿನಯ ಹೆಗಡೆ ಗಡಿಕೈ ಅವರಿಂದ ಗ್ಲೋ ಆರ್ಟ್ಸ್, ಬೆಂಗಳೂರಿನ ಕಲಾ ನಾದಮ್–ನಂದಿನಿ ಮೆಹತಾ ಬಳಗದಿಂದ ಕಥಕ್ ನೃತ್ಯ ನಡೆಯುವುದು.

21ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರು ವರ್ಕಾಡಿಯ ರವಿ ಅಲೆವೂರಾಯ ಅವರಿಂದ ಸ್ತ್ರೀ ಪಾತ್ರ ಕೇಂದ್ರಿತ ಏಕವ್ಯಕ್ತಿ ಯಕ್ಷಗಾನ ನಡೆಯುವುದು.

ಸಂಜೆ 6ಕ್ಕೆ ಪಂ.ಶ್ರೀಪಾದ ಹೆಗಡೆ ಕಂಪ್ಲಿ ಅವರಿಂದ ಸಂಗೀತ, ನಾಗವೇಣಿ ಹೆಗಡೆ ಕಂಪ್ಲಿ ಅವರಿಂದ ಹಾರ್ಮೋನಿಯಂ, ಗುರುಮೂರ್ತಿ ವೈದ್ಯ ಬೆಂಗಳೂರು ಅವರಿಂದ ತಬಲಾ ಸಾಥ್, ಸಾಗರದ ನಾಟ್ಯ ತರಂಗ ಟ್ರಸ್ಟ್‌ನಿಂದ ನೃತ್ಯ ರೂಪಕ, ಹೈದರಾಬಾದ್‌ನ ಶ್ರೀ ವೆಂಕಟೇಶ್ವರ ನಾಟ್ಯ ಮಂಡಳಿಯಿಂದ ‘ಪಾತಾಳ ಬೈರವಿ’ ನಡೆಯುವುದು.

22ರಂದು ಬೆಳಿಗ್ಗೆ 10.30ಕ್ಕೆ ಯಕ್ಷಗಾನದ ಮೇರು ನಟರಾದ ಪರಮಯ್ಯ ಹಾಸ್ಯಗಾರ ಕರ್ಕಿ ಹಾಗೂ ಕುರಿಯ ವಿಠ್ಠಲ ಶಾಸ್ತ್ರಿ ಕುರಿತ ಚಿಂತನಾ ಗೋಷ್ಠಿ ನಡೆಯಲಿದೆ.

ಸಂಜೆ 4.30ಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಕುಂಜಾಲು ರಾಮಕೃಷ್ಣ ನಾಯಕ್ ಅವರಿಗೆ ಶ್ರೀ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಜೆ 6ಕ್ಕೆ ಬೆಂಗಳೂರಿನ ಅನನ್ಯ ತಂಡದಿಂದ  ಭರತನಾಟ್ಯ, ಹೈದರಾಬಾದ್‌ನ ವೆಂಕಟೇಶ್ವರ ನಾಟ್ಯ ಮಂಡಳಿಯಿಂದ ಮಾಯಾ ಬಜಾರ್ ನಾಟಕ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.