ಹೊನ್ನಾವರ: ಮುಖ್ಯ ಬೆಳೆಯ ಜೊತೆಗೆ ರೈತರು ಪರ್ಯಾಯ ಬೆಳೆಯೊಂದನ್ನು ಬೆಳೆಸುವುದನ್ನು ರೂಢಿಸಿಕೊಳ್ಳಬೇಕು. ಲಾಭದಾಯಕವಾದ ಕೊಕೋವನ್ನು ಪಾರ್ಯಾಯ ಬೆಳೆಯಾಗಿ ಆಯ್ದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಂಜುನಾಥ ನಾಯ್ಕ ರೈತರಿಗೆ ಸಲಹೆ ನೀಡಿದರು.
ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಹೊನ್ನಾವರ ಘಟಕ ಹಾಗೂ ಬೆಳಗಾವಿಯ ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯ ಆಶ್ರಯದಲ್ಲಿಹಡಿನಬಾಳದಲ್ಲಿ ನಡೆದ ‘ಕೊಕೋ ಬೆಳೆ ಉತ್ಪಾದನೆ, ಸಂಸ್ಕರಣೆ ಹಾಗೂ ಮಾರುಕಟ್ಟೆ’ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಕೋ ಒಂದು ಲಾಭದಾಯಕ ಉಪಬೆಳೆಯಾಗಿದ್ದು, ಜಿಲ್ಲೆಯ ಪರಿಸರ ಈ ಬೆಳೆಗೆ ತಕ್ಕುದಾಗಿದೆ. ಅಡಿಕೆ, ತೆಂಗಿನ ತೋಟ ಹಾಗೂ ಸೊಪ್ಪಿನ ಬೆಟ್ಟ ಸೇರಿದಂತೆ ಸುಮಾರು 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯಬಹುದು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಆಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ ಅಭಿಪ್ರಾಯಪಟ್ಟರು.
ಶಿರಸಿ ತೋಟಗಾರಿಕಾ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಬಸವರಾಜ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿದರು. ಜನರು ಕೃಷಿಯನ್ನು ಮರೆತರೆ ಬದುಕು ದುಸ್ತರವಾಗುವುದು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಉಪ ನಿರ್ದೇಶಕ ಚಿದಂಬರ ಎಚ್ಚರಿಸಿದರು.
ಅರಭಾವಿ ತೋಟಗಾರಿಕಾ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಜಿ. ವೆಂಕಟೇಶ ಕಾರ್ಯಾಗಾರದ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ. ಸದಸ್ಯ ಕೃಷ್ಣ ಗೌಡ, ತಾ.ಪಂ. ಸದಸ್ಯೆ ಸುಜಾತಾ ಹೆಗಡೆ, ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಹಳ್ಳೀರ, ಕೃಷಿಕ ಗಣಪತಿ ಭಟ್ಟ ಮಾತನಾಡಿದರು.ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಹೊನ್ನಾವರ ಘಟಕದ ಅಧ್ಯಕ್ಷ ಜಗದೀಪ ತೆಂಗೇರಿ ಸ್ವಾಗತಿಸಿದರು. ಮಾರುತಿ ನಾಯ್ಕ ಗುಂಡಿಬೈಲ್ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ರಾಮಪ್ಪ ನಾಯ್ಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.