ADVERTISEMENT

ಕ್ವಾರಿ ಅನುಮತಿ ಕೋರಿ 600 ಅರ್ಜಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 9:25 IST
Last Updated 14 ಫೆಬ್ರುವರಿ 2011, 9:25 IST

ಕಾರವಾರ: ಕಲ್ಲುಕ್ವಾರಿ ಸಮಸ್ಯೆ ಕುರಿತು ಚರ್ಚಿಸಲು ಫೆ. 19ರಂದು ನಗರದ ಕೋಡಿಭಾಗ್‌ದಲ್ಲಿರುವ ಉಜ್ವಲಲಕ್ಷ್ಮಿ ಸಭಾಂಗಣದಲ್ಲಿ ಕಲ್ಲುಕ್ವಾರಿ ಗುತ್ತಿಗೆದಾರರ, ಕೃಷರ್ ಮಾಲೀಕರ ಹಾಗೂ ಆರ್‌ಸಿಸಿ ಗುತ್ತಿಗೆದಾರರ ಸಭೆ ಕರೆಯಲಾಗಿದೆ ಎಂದು ವಕೀಲ ಕೆ.ಆರ್. ದೇಸಾಯಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಲ್ಲುಕ್ವಾರಿ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಗುವುದು. ಸಭೆ ವೈದ್ಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾರವಾರ- ಅಂಕೋಲಾ ತಾಲ್ಲೂಕಿನ ಕಲ್ಲುಕ್ವಾರಿ ಸ್ಥಗಿತಗೊಂಡಿರುವ ಸಮಸ್ಯೆಗಳ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಲಾಗಿದೆ. ಹೆಚ್ಚಿನ ಕ್ವಾರಿಗಳು ಅರಣ್ಯ ಪ್ರದೇಶದಲ್ಲಿರುವುದರಿಂದ ಸಮಸ್ಯೆ ಉದ್ಭವವಾಗಿದ್ದು ಸಾಕಷ್ಟು ಕಾನೂನಿನ ತೊಡಕುಗಳಿವೆ ಎದುರಾಗಿವೆ ಎಂದರು.

ಕ್ವಾರಿಗೆ ಅನುಮತಿ ಕೋರಿ ಒಟ್ಟು 600 ಅರ್ಜಿಗಳು ಬಂದಿವೆ. ಎಲ್ಲ ಅರ್ಜಿದಾರರಿಗೂ ಅನುಮತಿ ಕೊಟ್ಟರೆ ಅರಣ್ಯ ಪರಿಸ್ಥಿತಿ ಏನಾಗಬೇಕು ಎಂದು ಅರಣ್ಯಾಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಪರಿಸರ ಹಾಗೂ ಅಭಿವೃದ್ಧಿ ಸಮನ್ವಯದಿಂದ ಕೂಡಿರಬೇಕು ಈ ನಿಟ್ಟಿನಲ್ಲಿ ಸೂಕ್ತವಾದ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದು ದೇಸಾಯಿ ತಿಳಿಸಿದರು.

ತಾಲ್ಲೂಕಿನ ಶಿರವಾಡದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಒಟ್ಟು ಹದಿನೈದು ಕ್ವಾರಿಗಳಿವೆ. ಇಂತಹ ಅನಧಿಕೃತ ಕ್ವಾರಿಗಳಿಂದ ಅರಣ್ಯ ನಾಶ ಆಗುತ್ತದೆ ಎನ್ನುವ ಆತಂಕವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವ್ಯಕ್ತಪಡಿಸಿ ದ್ದಾರೆ ಎಂದರು.

ತಾಲ್ಲೂಕಿನಲ್ಲಿ ದೀಪಕ ವೈಂಗಣಕರ್ ಹಾಗೂ ಜಿ.ಕೆ.ರಾಮ್ ಅವರಿಗೆ ಸೇರಿದ ಕ್ವಾರಿಗಳು ಮಾತ್ರ ಮಾಲ್ಕಿ ಕ್ವಾರಿಗಳಾಗಿರುವುದರಿಂದ ಸದ್ಯ ಈ ಎರಡು ಕ್ವಾರಿಗಳಿಗೆ ಮಾತ್ರ ಅರಣ್ಯ ಇಲಾಖೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅವರು ನುಡಿದರು.

ಕ್ವಾರಿಗಳು ನಿಂತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ತುಂಬಾ ತೊಂದರೆ ಆಗಿದೆ. ಇದೇ ಪರಿಸ್ಥಿಯ ಲಾಭ ಪಡೆದ ಕೆಲವರು ಮನೆ ನಿರ್ಮಾಣಕ್ಕೆ ಬಳಸುವ ಕಲ್ಲುಗಳ ಲೋಡ್‌ಗೆ ಮನಸ್ಸಿಗೆ ಬಂದಂತೆ ದರ ಪಡೆದುಕೊಳ್ಳುತ್ತಿದ್ದಾರೆ ಎಂದು ದೇಸಾಯಿ ದೂರಿದರು.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಕಾರವಾರ ಬಂದರಿನಲ್ಲಿ ನಡೆದಿರುವ ಅದಿರು ಕಳ್ಳತನಕ್ಕೆ ಸಂಬಂಧಪಟ್ಟಂತೆ ನಗರಠಾಣೆಗೆ ದೂರು ನೀಡಲಾಗಿತ್ತು. ಇದರ ತನಿಖೆಗೆ ಸಂಬಂಧಪಟ್ಟಂತೆ ಸಿಪಿಐ ಅಂಥೋನಿ ಜಾನ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸ ಲಾಗಿತ್ತು. ಆದರೆ ತನಿಖೆಯನ್ನು ಸಿಐಡಿ ಹಸ್ತಾಂತರಿಸುವ ಕಾರಣಗಳು ತಿಳಿದು ಬಂದಿಲ್ಲ ಎಂದರು.

ತನಿಖೆಗೆ ನೇಮಿಸಿರುವ ಸಿಪಿಐ ಅಂಥೋನಿ ಜಾನ್ ಅವರ ಮೇಲೆ ರಾಜಕೀಯ ಒತ್ತಡವೇನಾದರೂ ಇತ್ತೆ ಅಥವಾ ತನಿಖೆ ನಡೆಸಲು ಸಿಪಿಐ ನಿರ್ಲಕ್ಷ್ಯ ವಹಿಸಿದ್ದರೇ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.