ADVERTISEMENT

ಗ್ರಾಮಸ್ಥರಿಂದಲೇ ವಂತಿಗೆ ಸಂಗ್ರಹ, ಶ್ರಮದಾನ

ಸಿದ್ದಾಪುರ ಗ್ರಾಮಕ್ಕೆ ತೆರಳುವ ರಸ್ತೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 8:50 IST
Last Updated 15 ಜೂನ್ 2017, 8:50 IST
ಹಳಿಯಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮಕ್ಕೆ ತೆರಳುವ ಮಾರ್ಗವನ್ನು ಗ್ರಾಮಸ್ಥರೇ ವಂತಿಗೆ ಹಾಕಿ ಜೆಸಿಬಿ ಯಂತ್ರದ ಸಹಾಯ ಹಾಗೂ ಶ್ರಮದಾನದಿಂದ ಸಿದ್ಧಗೊಳಿಸುತ್ತಿರುವುದು.
ಹಳಿಯಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮಕ್ಕೆ ತೆರಳುವ ಮಾರ್ಗವನ್ನು ಗ್ರಾಮಸ್ಥರೇ ವಂತಿಗೆ ಹಾಕಿ ಜೆಸಿಬಿ ಯಂತ್ರದ ಸಹಾಯ ಹಾಗೂ ಶ್ರಮದಾನದಿಂದ ಸಿದ್ಧಗೊಳಿಸುತ್ತಿರುವುದು.   

ಹಳಿಯಾಳ: ಅನೇಕ ವರ್ಷಗಳಿಂದ ರಸ್ತೆ ಯನ್ನೇ ಕಾಣದಿರುವ ತಾಲ್ಲೂಕಿನ ಸಿದ್ದಾ ಪುರ ಗ್ರಾಮಕ್ಕೆ ತೆರಳಲು ಗ್ರಾಮಸ್ಥರೇ ವಂತಿಗೆ ಹಾಕಿ ಜೆಸಿಬಿ ಯಂತ್ರದ ಸಹಾಯ ಹಾಗೂ ಶ್ರಮದಾನದಿಂದ ಗ್ರಾಮಸ್ಥರೇ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಸಿದ್ದಾಪುರ ಗ್ರಾಮ ರಚನೆಯಾದಾಗಿನಿಂದ ಗ್ರಾಮಕ್ಕೆ ತೆರಳಲು ಸ್ಥಳೀಯ ಆಲೋಳ್ಳಿ, ಖಾಮಡೋಳ್ಳಿ ಕೂಡು ರಸ್ತೆಯಿಂದ ಸಾಗಬೇಕಾಗಿದ್ದು, ಇನ್ನೊಂದೆಡೆ ಕೆಸರೋಳ್ಳಿ ಗ್ರಾಮದಿಂದ ತೆರಳ ಬೇಕಾಗುತ್ತದೆ. ಕೆಸರೋಳ್ಳಿ ಗ್ರಾಮದಿಂದ ತೆರಳಬೇಕಾದರೇ ಸಿದ್ದಾಪುರ ಗ್ರಾಮದಿಂದ ದೂರವಾಗುತ್ತಿದ್ದು, ಆಲೋಳ್ಳಿ ಖಾಮಡೋಳ್ಳಿ ಗ್ರಾಮದಿಂದ ತೆರಳಲು ಹಳಿಯಾಳದಿಂದ ಕೇವಲ 4 ಕಿ.ಮೀ ಅಂತರದಲ್ಲಿ ಗ್ರಾಮಕ್ಕೆ ತೆರಳಲು ಸಾಧ್ಯವಾಗುತ್ತದೆ.

ಗ್ರಾಮದಲ್ಲಿ ಒಟ್ಟು 16 ಕುಟುಂಬಗಳು ವಾಸಿಸುತ್ತಿವೆ. ಗ್ರಾಮದಿಂದ ಬೇರೆ ಗ್ರಾಮಕ್ಕಾಗಲಿ, ಪಟ್ಟಣಕ್ಕಾಗಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗಕ್ಕಾಗಲಿ ಬರಲು ಆಲೋಳ್ಳಿ ಖಾಮಡೋಳ್ಳಿ ಕೂಡು ರಸ್ತೆಯಿಂದಲೇ ಸಾಗಬೇಕಾಗುತ್ತದೆ.

ಈ ರಸ್ತೆಯಿಂದ ಬರಬೇಕೆಂದರೆ ಮಳೆಗಾಲದಲ್ಲಿ ಪೂರ್ತಿ ಜಲಾವೃತ ಗೊಂಡು ಕೆಸರಿನಿಂದ ತುಂಬಿ ಸಂಚಾರ ಸ್ಥಗಿತಗೊಂಡು ಗ್ರಾಮಸ್ಥರು ಅನೇಕ ಸೌಲಭ್ಯಗಳಿಂದ ವಂಚಿತ ರಾಗುತ್ತಿರು ವುದನ್ನು ಕಂಡು ಗ್ರಾಮದ ಎಲ್ಲ ಕುಟುಂಬ ವರ್ಗದವರು ಸೇರಿ ಸಭೆ ನಡೆಸಿ ಒಟ್ಟಾರೇ ಅಭಿಪ್ರಾಯ ಮಂಡಿಸಿ ಪ್ರತಿ ಕುಟುಂಬದ ಸದಸ್ಯರು ₹ 500 ವಂತಿಗೆ ಹಾಕಿ ಹಾಗೂ ತಾವು ಕೂಡ ರಸ್ತೆ ನಿರ್ಮಾಣ ಮಾಡಲು ಶ್ರಮದಾನಗೈದು ರಸ್ತೆ ನಿರ್ಮಾಣ ಮಾಡಬೇಕೆಂದು ಬುಧವಾರ ಬೆಳಿಗ್ಗೆಯಿಂದ 500 ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

‘ರಸ್ತೆ ನಿರ್ಮಾಣ ಕಾರ್ಯದ ಅಂತರದಲ್ಲಿಯೇ ಸುಮಾರು ₹1.40 ಕೋಟಿ ವೆಚ್ಚದಿಂದ ಸಣ್ಣ ನೀರಾವರಿ ಇಲಾಖೆಯಿಂದ ಬ್ಯಾರೇಜ್ ಸಹಿತ ಸೇತುವೆ ನಿರ್ಮಾಣ ಮಾಡಲಾಗಿದ್ದು, ಗ್ರಾಮಕ್ಕೆ ಸಾಗುವ ಕೇವಲ 500 ಮೀ ಉದ್ದದ ರಸ್ತೆ ನಿರ್ಮಾಣವನ್ನು ಯಾವು ದೇ ಇಲಾಖೆಯವರು ಎಷ್ಟೇ ಮನವಿ ಸಲ್ಲಿಸಿದರೂ ಮಾಡುವ ಮನಸ್ಸನ್ನು ಮಾಡಲಿಲ್ಲ’ ಎಂದು ಗ್ರಾಮಸ್ಥರಾದ ಗಣಪತಿ ಗೌಡಾ ಹೇಳಿದರು.

ಗ್ರಾಮದಲ್ಲಿ 1 ರಿಂದ 5ನೇ ತರಗತಿ ವರೆಗೆ ಪ್ರಾಥಮಿಕ ಶಾಲೆಯಿದ್ದು, ಪ್ರೌಢ ಶಾಲೆಗೆ ವಿದ್ಯಾರ್ಥಿಗಳು ತೆರಳಲು ರಸ್ತೆ ಇಲ್ಲದೇ ಇರುವುದರಿಂದ ಹಾಗೂ ಮಳೆಗಾದಲ್ಲಿ ತೀವ್ರ ತೊಂದರೆ ಉಂಟಾಗುತ್ತಿರುವುದರಿಂದ ಗ್ರಾಮದ 11 ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರವಾದ ಕಾರವಾರಕ್ಕೆ ತೆರಳಿ ಹಾಸ್ಟೆಲ್ ನಲ್ಲಿ ದಾಖಲಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಎಂದು ಅವರು ಹೇಳಿದರು.

ಚುನಾವಣೆ ಬಹಿಷ್ಕಾರ: ಯಾವುದೇ ಚುನಾವಣೆಯಲ್ಲಿ ಗ್ರಾಮದ ಸದಸ್ಯರು ಮತದಾನ ಮಾಡದೇ ಚುನಾವಣೆ ಯನ್ನು ಬಹಿಷ್ಕಾರ ಮಾಡಲಿದ್ದೇವೆ. ಕಳೆದ ಹಲವು ವರ್ಷಗಳಿಂದ ಮನವಿಗಳ  ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರಕಾಶ ಸಿದ್ದಿ, ಪಾಂಡುರಂಗ ಘಾಡಿ, ಸಹದೇವ ಕೋಲೆಕರ, ರಮೇಶ ಪಾಟೀಲ, ಮಹಾದೇವ ಘಾಡಿ, ಶಂಕರ ಘಾಡಿ, ನಾರಾಯಣ ಗೌಡಾ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT