ಮುಂಡಗೋಡ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಇದೇ 20ರಂದು ನಡೆಯುವ ಜೆಡಿಎಸ್ ಸಮಾವೇಶಕ್ಕೆ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಡಿ.ಅನಿಲಕುಮಾರ ನೇತೃತ್ವದಲ್ಲಿ ಭರದಿಂದ ಸಾಗಿದೆ.
ರೈತರು, ಕೂಲಿಕಾರರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಜಿ ಮುಖ್ಯಮಂತ್ರಿಯೊಂದಿಗೆ ನೇರವಾಗಿ ಸಂವಾದ ನಡೆಸುವ ವ್ಯವಸ್ಥೆ ಸಮಾವೇಶದ ವಿಶೇಷ. `ಇಟ್ಟಿದ್ದೇ ಹೆಜ್ಜೆ, ಕೊಟ್ಟ್ದ್ದಿದೇ ಮಾತು' ಎಂಬ ಘೋಷಣೆಯೊಂದಿಗೆ ಮಾಜಿ ಮುಖ್ಯಮಂತ್ರಿಯನ್ನು ತಾಲ್ಲೂಕಿಗೆ ಕರೆಸಿ ಪಕ್ಷ ಸಂಘಟನೆಗೆ ವೇಗ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಯುವ ನಾಯಕ ಮಧು ಬಂಗಾರಪ್ಪ, ಎಚ್.ಡಿ.ಕುಮಾರಸ್ವಾಮಿ ಮತ್ತಿತರ ನಾಯಕರು ಹಳೂರ ಮಾರಿಕಾಂಬಾ ದೇವಾಲಯದಿಂದ ಮೆರವಣಿಗೆಯ ಮೂಲಕ ವೇದಿಕೆಯತ್ತ ಆಗಮಿಸಲಿದ್ದಾರೆ.
ತಾಲ್ಲೂಕು ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸುಮಾರು 25-30 ಸಾವಿರ ಜನರು ಕುಳಿತುಕೊಳ್ಳುವಂತ ವಿಶಾಲವಾದ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸಮಾವೇಶದ ಪ್ರಚಾರ ಕಾರ್ಯ ತುರುಸಿನಿಂದ ಕೂಡಿದ್ದು ವಿಶೇಷವಾಗಿ ರೈತ ಸಮುದಾಯದ ಜನರನ್ನು ಸಮಾವೇಶಕ್ಕೆ ಆಹ್ವಾನಿಸಲಾಗುತ್ತಿದೆ. ಯುವಕರ ತಂಡಗಳು ಒಂದೊಂದು ಭಾಗದಲ್ಲಿ ಧ್ವನಿವರ್ಧಕ ಮೂಲಕ ಸಮಾವೇಶದ ಕುರಿತು ಪ್ರಚಾರ ನಡೆಸುತ್ತಿದ್ದು ಪಟ್ಟಣದ ರಸ್ತೆ ಬದಿಯಲ್ಲಿ ಸ್ವಾಗತ ಕೋರುವ ಬ್ಯಾನರ, ಬಂಟಿಂಗ್ಗಳು ರಾರಾಜಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.