ADVERTISEMENT

ತಹಸೀಲದಾರ್‌ಗೆ ಹೊಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 6:55 IST
Last Updated 1 ಜೂನ್ 2011, 6:55 IST

ಯಲ್ಲಾಪುರ: ಪ.ಪಂ. ಮುಖ್ಯಾಧಿಕಾರಿಗಳ ವಿರುದ್ಧ ಹಲವಾರು ದೂರುಗಳಿರುವ ಹಿನ್ನಲೆಯಲ್ಲಿ ಮತ್ತು ಹೆಚ್ಚಿನ ಅವಧಿಯಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗದೆ ಇರುವ ಕಾರಣಕ್ಕೆ ಮುಖ್ಯಾಧಿಕಾರಿ ಜಟ್ಟಪ್ಪರವರ ಸ್ಥಳದಲ್ಲಿ ತಾತ್ಕಾಲಿಕವಾಗಿ ಯಲ್ಲಾಪುರ ತಹಸೀಲದಾರರಿಗೆ ಹೊಣೆ ವಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ  ಹೇಳಿದರು.

ಮಂಗಳವಾರ ಪಟ್ಟಣ ಪಂಚಾಯತಕ್ಕೆ ತಹಸೀಲ್ದಾರ ಹಾಗೂ ಉಪವಿಬಾಗಾಧಿಕಾರಿಗಳೊಂದಿಗೆ ಹಟಾತ್ ಬೇಟಿ ನೀಡಿ ಪ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಜಿಲ್ಲಾಧಿಕಾರಿಗಳು ಆಗಮಿಸಿದ್ದ ಸಮಯದಲ್ಲಿ ಮುಖ್ಯಾಧಿಕಾರಿ ಜಟ್ಟಪ್ಪ ಗೈರು ಹಾಜರಿದ್ದರು. ಅವರು ಮಂಗಳವಾರ ಪಟ್ಟಣದ ಜೋಡುಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ.  ಮಾನ್ಸೂನ್ ಪ್ರಾರಂಭವಾಗಿದೆ. ಮಳೆಗಾಲ ಪ್ರಾರಂಭವಾಗುವ ಮುನ್ನ ಜೋಡುಕೆರೆ ಹೂಳೆತ್ತುವ ಕಾರ್ಯ ಪೂರ್ಣಗೊಳಿಸಲಾಗು ವುದು.
 
ಕೆರೆ ಕಾಮಗಾರಿ ಇನ್ನೂ ನಾಲ್ಕು ದಿನಗಳಲ್ಲಿ ಪೂರ್ಣಗೊಳಿಸುವಂತೆ ಕೆರೆ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಿರ್ಮಿತಿ ಕೇಂದ್ರದವರಿಗೆ ಸೂಚನೆ ನೀಡಲಾಗಿದೆ ಎಂದರು.

ಯಲ್ಲಾಪುರ ಪ.ಪಂ. ಎಸ್‌ಎಫ್‌ಸಿ, ಮುಖ್ಯಮಂತ್ರಿ ಸಣ್ಣ ಮತ್ತು ಮದ್ಯಮ ಪಟ್ಟಣ ಅಭಿವೃದ್ಧಿ ಯೋಜನೆ, 13 ನೇ ಹಣಕಾಸು ಯೋಜನೆಯಡಿಯಲ್ಲಿ ರೂ. 6 ರಿಂದ 7 ಕೋಟಿ ಬಂದಿದ್ದು, ಕೆಲವೊಂದಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇನ್ನು ಕೆಲವು ಕಾಮಗಾರಿಗಳಿಗೆ ಅನುಮೋದನೆ ಪಡೆಯಬೇಕಾಗಿದೆ. ಕುಡಿಯುವ ನೀರಿನ ಸಮರ್ಪಕ ಬಳಕೆ ಮತ್ತು ಘನ ತ್ಯಾಜ್ಯ ವಸ್ತುಗಳ ವಿಲೇವಾರಿಯಲ್ಲಿ ಪರಸರಕ್ಕೆ ದಕ್ಕೆ ಆಗದಂತೆ ನಿರ್ವಹಣೆ ಮಾಡಬೇಕಾಗಿದೆ ಎಂದರು.

ಎರಡ್ಮೂರು ತಿಂಗಳಿಗೊಮ್ಮೆ  ನಡೆಯುವ ಲೋಕ ಅದಾಲತ್‌ದಲ್ಲಿ ಮುಖ್ಯಾಧಿಕಾರಿಗಳು ಉತ್ತರಿಸಬೇಕಾಗು ತ್ತದೆ. ಈ ಎಲ್ಲ ಜವಾಬ್ದಾರಿಯನ್ನು ಮುಖ್ಯಾಧಿಕಾರಿ ಜಟ್ಟಪ್ಪ ಸಮರ್ಪಕವಾಗಿ ನಿರ್ವಹಿಸದೆ ಇರುವ ಕಾರಣಕ್ಕೆ ತಹಸೀಲ್ದಾರರಿಗೆ ಹೊಣೆ ವಹಿಸಿಕೊಡಲಾಗಿದೆ ಎಂದು ಹೇಳಿದರು.

ರೋಲರ್ ಸ್ಕೇಟಿಂಗ್ ರ‌್ಯಾಲಿ ಇಂದು

ಕಾರವಾರ: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಕೈಗಾ ಟೌನ್‌ಶಿಪ್‌ನ ಐದು ವರ್ಷದ ಬಾಲಕ ಸುಬಾನ್ ಹನಬರ್ ಹಾಗೂ ಅಮೀಷಾ ಹನಬರ್ ರೋಲರ್ ಸ್ಕೇಟಿಂಗ್ ಮೂಲಕ ಕಾರವಾರಕ್ಕೆ ಆಗಮಿಸಲಿದ್ದಾರೆ.

ಪರಿಯೋಜನಾ ನೌಕರರ ಮನರಂಜನಾ ಮಂಡಳಿ ಹಾಗೂ ಕೈಗಾ ಅಮೆಚೂರ್ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಆಶ್ರ ಯದಲ್ಲಿ ನಡೆಯಲಿದ್ದು ಕದ್ರಾದಿಂದ ಪ್ರಾರಂಭವಾಗಿ 38 ಕಿ.ಮೀ. ಸ್ಕೇಟಿಂಗ್ ರ‌್ಯಾಲಿ ನಗರದ ಡಿಸಿ ಕಚೇರಿ ಸಮೀಪ ಕೊನೆಯಾಗಲಿದೆ. ಕೆಪಿಇಆರ್‌ಸಿ ಅಧ್ಯಕ್ಷ ಜೆ.ಆರ್. ದೇಶಪಾಂಡೆ, ಕೆಪಿಸಿಸಿಯ ವಿಜಯ ಕುಲಕರ್ಣಿ ಸ್ಕೇಟಿಂಗ್‌ಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಶಾಲೆ ಪ್ರಾರಂಭೋತ್ಸವ

ಸಿದ್ದಾಪುರ:  ತಾಲ್ಲೂಕಿನ ಕೊಡಗಿಬೈಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ನಡೆಯಿತು. ಮುಖ್ಯಅತಿಥಿಗಳಾಗಿ ಬಿದ್ರಕಾನ ಗ್ರಾ.ಪಂ. ಸದಸ್ಯೆ ಸೀತಮ್ಮ ಹೆಗಡೆ  ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಚ್. ಗೌಡ ಮಾತನಾಡಿದರು.  ಅನಂತ ಗೌಡ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ವೆಂಕಟೇಶ ಮಡಿವಾಳ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಆರ್.ಜಿ. ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.