ಮುಂಡಗೋಡ: ಹರಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಮೇಯಲು ಹೋಗಿದ್ದ ನಾಲ್ಕು ಎಮ್ಮೆಗಳು ಮೃತಪಟ್ಟ ಘಟನೆ ಪಟ್ಟಣದ ನಂದೀಶ್ವರ ನಗರದ ಸನಿಹ ಶುಕ್ರವಾರ ಸಂಭವಿಸಿದೆ.
ಫಕ್ಕೀರಪ್ಪ ಚನ್ನಪ್ಪ ಗೌಳಿ ಎಂಬುವರಿಗೆ ಸೇರಿದ ಎಮ್ಮೆಗಳೆಂದು ತಿಳಿದುಬಂದಿದೆ. ಕುಡಿಯುವ ನೀರು ಬೋರವೆಲ್ಗೆ ಅಳವಡಿಸಿದ ವಿದ್ಯುತ್ ತಂತಿ ಹರಿದುಬಿದ್ದಿದ್ದರಿಂದ ಇಂತಹ ದುರ್ಘಟನೆ ನಡೆದಿದೆ. ಎಂದಿನಂತೆ ಎಮ್ಮೆಗಳು ಇದೇ ಸ್ಥಳದಲ್ಲಿ ಮೇಯಲು ಹೋದ ಸಂದರ್ಭದಲ್ಲಿ ಹರಿದುಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ನಾಲ್ಕು ಎಮ್ಮೆಗಳು ಹಾಗೂ ಒಂದು ನಾಯಿ ದಾರುಣ ಸಾವು ಕಂಡಿವೆ. ಅದೃಷ್ಟವಶಾತ್ ಎಮ್ಮೆ ಮೇಯಿಸಲು ಹೋಗಿದ್ದ ಯುವಕ ಅಪಾಯದಿಂದ ಪಾರಾಗಿದ್ದಾನೆ.
ವಿಷಯ ತಿಳಿದ ತಕ್ಷಣ ಘಟನಾ ಸ್ಥಳದಲ್ಲಿನ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಅಧಿಕಾರಿಗಳು ನಂತರ ಹೆಸ್ಕಾಂ ಅಧಿಕಾರಿ ಟಿ.ಎಚ್.ಲಮಾಣಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಎಮ್ಮೆ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.