ಕಾರವಾರ: ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ನಗರದ ವಿವಿಧೆಡೆ ಹಾಕಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಬ್ಯಾನರ್ ಹಾಗೂ ಬಂಟಿಂಗ್ಸ್ಗಳನ್ನು ಶುಕ್ರವಾರ ತೆರವು ಮಾಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ, ವಾರ್ತಾ ಇಲಾಖೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳ ಮುಂದೆ ಹಾಕಲಾಗಿದ್ದ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ವಿವರಗಳುಳ್ಳ ಜಾಹೀರಾತು ಫಲಕವನ್ನು ತೆರವುಗೊಳಿಸಲಾಯಿತು.
ಇನ್ನೂ ರಾರಾಜಿಸುತ್ತಿರುವ ಬ್ಯಾನರ್ಗಳು:
ಕೆಲ ಖಾಸಗಿ ವ್ಯಕ್ತಿಗಳು ನಗರಸಭೆಯಿಂದ ಅನುಮತಿ ಪಡೆದು ನಗರದ ವಿವಿಧೆಡೆ ಹಾಕಿರುವ ತಮ್ಮ ಪಕ್ಷಗಳ ನಾಯಕರ ಭಾವಚಿತ್ರವಿರುವ ಬ್ಯಾನರ್ಗಳು ತೆರವುಗೊಂಡಿಲ್ಲ. ಈ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬಂದಿಲ್ಲವಾದ್ದರಿಂದ ನಗರಸಭೆ ಸಿಬ್ಬಂದಿ ಅವುಗಳ ತೆರವಿಗೆ ಮುಂದಾಗಿಲ್ಲ.
ಖಾಸಗಿಯಾಗಿ ವಿವಿಧ ಪಕ್ಷಗಳ ಕಾರ್ಯಕರ್ತರು ನಗರದ ವಿವಿಧೆಡೆ ಹಾಕಿರುವ ಬ್ಯಾನರ್, ಬಂಟಿಂಗ್ಸ್ಗಳನ್ನು ತೆರವುಗೊಳಿಸಲು ಸುತ್ತೋಲೆ ಹೊರಡಿಸುವ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.