ಕುಮಟಾ: ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರ ಸಣ್ಣ- ಪುಟ್ಟ ಕೆಲಸಗಳನ್ನು ಮಾಡಿಕೊಟ್ಟು ಅವರ ವಿಶ್ವಾಸಗಳಿಸಬೇಕು. ಈ ಮೂಲಕ ಪಕ್ಷವನ್ನು ಗ್ರಾಮ ಮಟ್ಟದಲ್ಲಿ ಬಲಪಡಿಸಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸಲಹೆ ನೀಡಿದರು.
ಕುಮಟಾದ ಅಳ್ವೆಕೋಡಿಯಲ್ಲಿ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಬಡವರಿಗೆ ಸಾಕಷ್ಟು ಪಡಿತರ ಸಾಮಗ್ರಿ ದೊರೆಯುತ್ತಿತ್ತು. ಈಗ ಪಡಿತರ ಆಹಾರವೇ ಇಲ್ಲವಾಗಿದೆ ಎಂದು ಹೇಳಿದರು.
ಬಿಜೆಪಿ ಸರಕಾರ ಕಣ್ಣು, ಕಿವಿ, ಬಾಯಿ ಇಲ್ಲದ ನೀಚ ಸರಕಾರ. ಕಾಂಗ್ರೆಸ್ನಲ್ಲಿ ತಪ್ಪು ಮಾಡಿದ ಪ್ರಭಾವಿ ಸಚಿವರು, ಸಂಸದರೆಲ್ಲ ಇಂದು ಜೈಲಿನಲ್ಲಿದ್ದಾರೆ. ಆದರೆ ಭ್ರಷ್ಟಾಚಾರದಿಂದ ಮುಳುಗಿ ಹೋಗಿರುವ ಬಿ.ಜೆ.ಪಿ. ಸಚಿವರು ಏನೂ ಆಗದವರಂತೆ ರಾಜಾರೋಷ ವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕಾಗೇರಿ ಅವರಿಗೆ ತಮ್ಮ ಕ್ಷೇತ್ರ ಶಿರಸಿಯನ್ನು ಅಭಿವೃದ್ಧಿಗೊಳಿಸುವ ಭರದಲ್ಲಿ ಉಳಿದ ಕ್ಷೇತ್ರಗಳನ್ನು ಮರೆತಿದ್ದಾರೆ~ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭಿಮಣ್ಣ ನಾಯ್ಕ, `ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹಲವಾರು ವರ್ಷಗಳಿಂದ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ಮೂಲಕ ತನ್ನ ಹಿಡಿತ ಸಾಧಿಸಿಕೊಂಡಿರುವುದರ ಪ್ರಯೋಜನವನ್ನು ಕಾಂಗ್ರೆಸ್ ಕಾರ್ಯಕರ್ತರು ಜನತೆಗೆ ನೀಡಲು ಮುಂದೆ ಬರಬೇಕು~ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯ್ಕ ಸ್ವಾಗತಿಸಿದರು. ನಾಗೇಶ ನಾಯ್ಕ, ಎಸ್.ಕೆ. ಭಾಗ್ವತ, ಶಿವಾನಂದ ಹೆಗಡೆ, ಡಾ. ಜಿ.ಜಿ. ಹಗೆಡೆ, ಆರ್.ಎಚ್. ನಾಯ್ಕ, ವನಿತಾ ನಾಯ್ಕ, ಜಗನ್ನಾಥ ನಾಯ್ಕ, ಮಾದೇವಿ ಗೌಡ, ರೋಶನಿ ಭಟ್ಟ, ಹನುಮಂತ ಪಟಗಾರ, ಕುಸುಮಾ ರಾಜಗೋಪಾಲ ಅಡಿ, ಗಜಾನನ ಪೈ, ವಿನಾಯಕ ನಾಯ್ಕ, ದೇವಪ್ಪ ನಾಯ್ಕ, ಗೋಪಾಲಕೃಷ್ಣ ನಾಯ್ಕ, ಗಾಯತ್ರಿ ಗೌಡ, ಎಂ.ಡಿ. ನಾಯ್ಕ,ಫ್ರಾನ್ಸಿಸ್ ಫರ್ನಾಂಡಿಸ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.