ಶಿರಸಿ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರೈತರ ಬಳಿ ಇರುವ ಬಂದೂಕುಗಳಲ್ಲಿ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವ ಕಾರ್ಯ ಭರದಿಂದ ನಡೆಯುತ್ತಿದೆ. ಜಿಲ್ಲಾಧಿಕಾರಿ ಆದೇಶದಂತೆ ಕೃಷಿಕರು ಬಂದೂಕನ್ನು ಠಾಣೆಯಲ್ಲಿದ್ದು, ನಿಗದಿತ ಅರ್ಜಿ ಭರ್ತಿ ಮಾಡಿ ರಸೀದಿ ಪಡೆದುಕೊಂಡು ಹೋಗುತ್ತಿದ್ದಾರೆ.
ಕೃಷಿ ಬೆಳೆಗಳ ಪೀಕು ಬರುವ ಅವಧಿಯಲ್ಲಿಯೇ ಠಾಣೆಗಳಲ್ಲಿ ಬಂದೂಕು ಕೊಂಡೊಯ್ದು ಇರುವ ಅನಿವಾರ್ಯತೆ ರೈತರಿಗೆ ಎದುರಾಗಿದೆ. ಹೀಗಾಗಿ ಒಂದು ದಿನದ ಕೃಷಿ ಕೆಲಸಕ್ಕೆ ವಿರಾಮ ಹೇಳಿ ಬಂದೂಕು ಹೆಗಲಿಗೇರಿಸಿ ರೈತರು ಪೇಟೆಗೆ ಬರುತ್ತಿದ್ದಾರೆ. ಎಲ್ಲೆಲ್ಲೂ ಬಂದೂಕು ಹಿಡಿದು ಓಡಾಡುತ್ತಿರುವ ವ್ಯಕ್ತಿಗಳು ಕಾಣುತ್ತಿದ್ದಾರೆ !
ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ 4663 ಅನುಮತಿ ಪಡೆದ ಬಂದೂಕುಗಳಿವೆ. ಶಿರಸಿ ನಗರದಲ್ಲಿ 28 ಹಾಗೂ ಮಾರುಕಟ್ಟೆ ಠಾಣೆ ಸರಹದ್ದಿನಲ್ಲಿ 25 ಲೈಸನ್ಸ್ ಹೊಂದಿದ ಬಂದೂಕು ಇದ್ದು, ಈವರೆಗೆ 12 ಜನ ಠಾಣೆಗೆ ತಂದು ಒಪ್ಪಿಸಿದ್ದಾರೆ. ಗ್ರಾಮೀಣದಲ್ಲಿ 1180, ಬನವಾಸಿ ಭಾಗದಲ್ಲಿ 414, ಸಿದ್ದಾಪುರ, 838, ಯಲ್ಲಾಪುರ 1664 ಹಾಗೂ ಮುಂಡಗೋಡ ತಾಲ್ಲೂಕಿನಲ್ಲಿ 486 ಲೈಸನ್ಸ್ ಪಡೆದ ಬಂದೂಕುಗಳಿವೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಿಗದಿತ ಅವಧಿಯಲ್ಲಿ ಬಂದೂಕು ಹೊಂದಿದವರು ಠಾಣೆಯಲ್ಲಿ ತಂದು ಸಂಗ್ರಹಿಸಿ ಚುನಾವಣೆಯ ನಂತರ ಸಂಗ್ರಹದ ವೇಳೆ ಪಡೆದಿದ್ದ ರಸೀದಿಯನ್ನು ತೋರಿಸಿ ನಿಯಮದಂತೆ ವಾಪಸ್ ಒಯ್ಯಬೇಕಾಗಿದೆ.
ಗುರುವಾರ ಹಾಗೂ ಶುಕ್ರವಾರದ ಅವಧಿಯಲ್ಲಿ 1ಸಾವಿರಕ್ಕೂ ಅಧಿಕ ಜನರು ಪೊಲೀಸ್ ಠಾಣೆಗೆ ಬಂದು ಬಂದೂಕು ಠೇವಣಿ ಇಟ್ಟು ಹೋಗಿದ್ದಾರೆ. ನೀತಿ ಸಂಹಿತೆ ಘೋಷಣೆಯಾದ ತಕ್ಷಣದಿಂದಲೇ ಇದು ಜಾರಿಯಾಗುತ್ತಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಬಂದೂಕು ಹೊಂದಿರುವ ವ್ಯಕ್ತಿಗೆ ನೋಟಿಸ್ ನೀಡಲಾಗುತ್ತದೆ. ಇದಕ್ಕಾಗಿ ಕೊನೆಯ ದಿನಾಂಕ ನಿಗದಿಪಡಿಸಿಲ್ಲವಾದರೂ ರೈತರು ಆದಷ್ಟು ಶೀಘ್ರ ಬಂದೂಕನ್ನು ತಂದು ಒಪ್ಪಿಸಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.
ಕೃಷಿ ಬೆಳೆಗಳ ರಕ್ಷಣೆಯ ಉದ್ದೇಶಕ್ಕಾಗಿ ಪ್ರಾಣಿಗಳನ್ನು ಬೆದರಿಸಲು ರೈತರು ಲೈಸನ್ಸ್ ಹೊಂದಿರುವ ಬಂದೂಕು ಇಟ್ಟುಕೊಳ್ಳುತ್ತಾರೆ. ಚಾಲಿ ಅಡಿಕೆ ಒಣಗಿಸುವ ಹಂಗಾಮು ಇದಾಗಿದೆ. ಅಲ್ಲದೇ ಅಡಿಕೆ ಎಳೆಮಿಳ್ಳೆಗಳಿಗೆ ಮಂಗಗಳ ಹಾವಳಿ ಸಹ ಹೆಚ್ಚಾಗಿದೆ. ಚುನಾವಣೆ ಎದುರಾಗಿದ್ದರಿಂದ ರೈತರು ಅನಿವಾರ್ಯವಾಗಿ ಬಂದೂಕನ್ನು ಠಾಣೆಗೆ ಒಪ್ಪಿಸಬೇಕಾಗಿದೆ ಎನ್ನುತ್ತಾರೆ ದತ್ತಾತ್ರೇಯ ಹೆಗಡೆ ಗೋಟಿಗೆತೋಟ.
ದೊಡ್ಡ ಸಂಖ್ಯೆಯಲ್ಲಿ ಬಂದೂಕನ್ನು ಠಾಣೆಯಲ್ಲಿ ಸಂಗ್ರಹಿಸಿಡುವುದರಿಂದ ಬಂದೂಕಿಗೆ ಯಾವುದೇ ಹಾನಿಯಾಗದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.