ADVERTISEMENT

ಬನವಾಸಿ: ಮಳೆ ಕೊರತೆ; ಸಂಕಷ್ಟದಲ್ಲಿ ರೈತರು

ಭತ್ತಕ್ಕೆ ಬೆಂಕಿ ರೋಗ ಬಾಧೆ: ‘ಹಿಂಗ್ ಮಳಿ ಆದ್ರ್ ಈ ವರ್ಸಾನೂ ಬೆಳೆ ಹೋತ್ರಿ’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 7:25 IST
Last Updated 15 ಆಗಸ್ಟ್ 2016, 7:25 IST
ಶಿರಸಿ ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೋಗಪೀಡಿತ ಭತ್ತದ ಗದ್ದೆಗಳಿಗೆ ಉಪವಿಭಾಗಾಧಿಕಾರಿ ರಾಜು ಮೊಗವೀರ, ತಹಶೀಲ್ದಾರ್ ಬಸಪ್ಪ ಪೂಜಾರಿ, ಸಹಾಯಕ ಕೃಷಿ ನಿರ್ದೇಶಕ ಕೆ.ವಿ. ಕೂರ್ಸೆ ಭೇಟಿ ನೀಡಿ ಪರಿಶೀಲಿಸಿದರು
ಶಿರಸಿ ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೋಗಪೀಡಿತ ಭತ್ತದ ಗದ್ದೆಗಳಿಗೆ ಉಪವಿಭಾಗಾಧಿಕಾರಿ ರಾಜು ಮೊಗವೀರ, ತಹಶೀಲ್ದಾರ್ ಬಸಪ್ಪ ಪೂಜಾರಿ, ಸಹಾಯಕ ಕೃಷಿ ನಿರ್ದೇಶಕ ಕೆ.ವಿ. ಕೂರ್ಸೆ ಭೇಟಿ ನೀಡಿ ಪರಿಶೀಲಿಸಿದರು   

ಶಿರಸಿ: ‘ಭರಣಿ ಮಳೆಗೆ ಬಿತ್ತಿದ್ ಸಸಿ ಇನ್ನೂ ಮರಿಯೊಡೆದು ಮೇಲೆದ್ದಿಲ್ಲ ನೋಡ್ರಿ. ಮೂರುವರೆ ತಿಂಗಳಿಗೆ ಸೊಂಟ ಮಟ ಬೆಳಿತಿದ್ದ ಭತ್ತದ ಸಸಿ ಇನ್ನೂ ಒಂದೂವರೆ ಅಡಿ ಬೆಳದಿಲ್ಲ. ಹಿಂಗ ಮಳಿ ಇಲ್ಲಾಂದ್ರ ಈ ವರ್ಸಾನೂ ಬೆಳೆ ಹೋತ್ರಿ’ ಎಂದು ರೈತ ಗದಿಗೆಪ್ಪ ಬಾಳೆಹಳ್ಳಿ ಅಧಿಕಾರಿಗಳ ಎದುರು ಅಲವತ್ತುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಉಪವಿಭಾಗಾಧಿಕಾರಿ ರಾಜು ಮೊಗವೀರ, ತಹಶೀಲ್ದಾರ್ ಬಸಪ್ಪ ಪೂಜಾರಿ, ಸಹಾಯಕ ಕೃಷಿ ನಿರ್ದೇಶಕ ಕೆ.ವಿ. ಕೂರ್ಸೆ ಅವರು ಭಾನುವಾರ ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಬೆಂಕಿ ರೋಗ ಬಾಧಿತ ಭತ್ತದ ಗದ್ದೆಗಳನ್ನು ವೀಕ್ಷಿಸಿದರು.

ಗದ್ದೆಯಲ್ಲಿ ರೋಗ ತಗಲಿರುವ ಸಸಿಗಳನ್ನು ಕಿತ್ತು ತೆಗೆದು ತೋರಿಸುತ್ತಿದ್ದ ಗದಿಗೆಪ್ಪ ‘ಇದೇನು ಹೊಸಾ ತಳಿ ಅಲ್ರಿ. ನಮ್ ಅಪ್ಪನ ಕಾಲದಿಂದ ಬೆಳಕೊಂಡ್ ಬಂದ್ ಮಾರ್ನೊಮಿ ಗಿಡ್ಡನೇ ಹೀಂಗಾ ಗೈತಿ. ಇಲಾಖೆ ಹೇಳಿದ ಔಷಧನೂ ಹಾಕೇವಿ. ಆದ್ರೂ ಬೆಂಕಿ ರೋಗ ಬಂದೈತಿ. ಮಳೆಬಂದು ಹೊಲ ದಾಗ್ ನೀರು ನಿಂತ್ರೆ ಅರ್ಧದಷ್ಟಾದ್ರು ಬೆಳೆ ಕೈಗೆ ಸಿಕ್ಕಾವು’ ಎಂದಾಗ ಜೊತೆಗಿದ್ದ ರೈತರು ನಮ್ಮದೂ ಇದೇ ಕತೆ ಎನ್ನುತ್ತಿದ್ದರು.

‘ಕಳೆದ ವರ್ಷ ಮಳೆ ಇಲ್ಲದೇ ರೈತರು ಬಿತ್ತನೆ ಮಾಡದೇ ಭೂಮಿಯನ್ನು ಹಾಗೆಯೇ ಬಿಟ್ಟಿದ್ದರು. ಈ ವರ್ಷ ಬಿತ್ತನೆ ಮುಗಿದಿದ್ದು, ನಾಟಿ ಕಾರ್ಯ ನಡೆಯುತ್ತಿದೆ. ಈ ವರ್ಷವೂ ನಮ್ಮ ಭಾಗದಲ್ಲಿ ಮಳೆಯ ಕೊರತೆ ಇದೆ. ಬೋರ್‌ವೆಲ್‌ ಇರುವವರು ನೀರು ಹಾಯಿಸಿ ಗದ್ದೆ ಬಿತ್ತನೆ ಮಾಡಿರುವ ಗದ್ದೆ ಸಂರಕ್ಷಿಸಿಕೊಂಡಿದ್ದಾರೆ. ಮಳೆಯನ್ನೇ ನಂಬಿ ಬಿತ್ತನೆ ಮಾಡಿರುವ ಗದ್ದೆಗಳು ಬಡವಾಗಿವೆ’ ಎಂದು ಕುಪಗಡ್ಡೆಯ ರೈತ ಅಬ್ದುಲ್ ಸತ್ತಾರ್ ಸಾಬ್ ವಿವರಿಸಿದರು.

ಗುಳೆ ಹೊರಟ ರೈತರು:‘ಈ ವರ್ಷದ ಮಳೆಯ ಪರಿಸ್ಥಿತಿ ಕಂಡು ರೈತರು ಈಗಾಗಲೇ ಗುಳೆ ಹೋಗಲು ಪ್ರಾರಂಭಿಸಿ ದ್ದಾರೆ. ಬದನಗೋಡ, ಅಂಡಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಬರದ ಛಾಯೆ ಆವರಿಸಿದೆ. ನಿತ್ಯ ಬೆಳಿಗ್ಗೆ ಬರುವ 50–60 ವಾಹನಗಳು ಜನರನ್ನು ಕೆಲಸಕ್ಕೆ ಕರೆದೊಯ್ಯುತ್ತವೆ.

ಈಭಾಗದಿಂದ 1500ರಷ್ಟು ಜನರು ದಿನವೂ ಕೂಲಿ ಕೆಲಸಕ್ಕೆ ಶಿರಸಿ, ಹುಲೇಕಲ್ ಭಾಗಕ್ಕೆ ಹೋಗಿ ಸಂಜೆ ವಾಪಸ್ ಬರುತ್ತಾರೆ. ಕೆಲವರು ಕೆಲಸ ಅರಸಿ ಕಾಫಿ ಸೀಮೆಗೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಅನಿಶ್ಚಿತ ಮಳೆಗಾಲದಿಂದ ಕಂಗೆಟ್ಟಿರುವ ಜನರು ರೈತಾಬಿ ಕೆಲಸದಿಂದ ದೂರ ಸರಿಯು ತ್ತಿರುವ ಆತಂಕ ಎದುರಾಗಿದೆ’ ಎಂದು ಕಾಳಂಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭೈರವ ಕಾಮತ ಹೇಳಿದರು.

ಕೃಷಿ ಇಲಾಖೆ ಲೆಕ್ಕಾಚಾರದ ಪ್ರಕಾರ ಬನವಾಸಿ ಹೋಬಳಿಯಲ್ಲಿ ಶೇ 37ರಷ್ಟು ಮಳೆಯ ಕೊರತೆ ಇದೆ. ವಾಡಿಕೆಗಿಂತ ಶೇ 75ರಷ್ಟು ಮಳೆ ಕಡಿಮೆಯಾಗಿದೆ ಎಂಬುದು ರೈತರು ನೀಡುವ ವಿವರಣೆ.

‘ತಾಲ್ಲೂಕಿನಲ್ಲಿ 3ಸಾವಿರ ಎಕರೆ ಭತ್ತ ಬಿತ್ತನೆ ಕ್ಷೇತ್ರವಿದೆ. ಇದರಲ್ಲಿ ಶೇ 25ರಷ್ಟು ಬೆಳೆಗಳಿಗೆ ಬೆಂಕಿ ರೋಗ ಬಾಧಿಸಿದೆ. ಭತ್ತ ನಾಟಿ ಮಾಡುವ ಕಾರ್ಯ ಪ್ರಗತಿಯಲ್ಲಿ ಶೇ 25ರಷ್ಟು ಇನ್ನೂ ಆಗಬೇಕಾಗಿದೆ. ಬಿಸಿಲು, ಮಳೆಯ ವಾತಾವರಣದಿಂದ ಭತ್ತಕ್ಕೆ ಬೆಂಕಿರೋಗ ಬರುತ್ತದೆ. ಇದಕ್ಕೆ ಪರಿಹಾರ ಕ್ರಮವನ್ನು ಸೂಚಿಸಲಾಗಿದೆ. ಬರುವ ದಿನಗಳಲ್ಲಿ ಉತ್ತಮ ಮಳೆಯಾದಲ್ಲಿ ರೈತರಿಗೆ ಬೆಳೆ ಕೈಗೆ ಸಿಗುವ ಆಶಾಭಾವವಿದೆ’ ಎಂದು ಕೆ.ವಿ. ಕೂರ್ಸೆ ಹೇಳಿದರು.

‘ರೈತರು ಎದುರಿಸುತ್ತಿರುವ ಸಮಸ್ಯೆ, ಭತ್ತಕ್ಕೆ ತಗುಲಿರುವ ರೋಗದ ರೈತರೊಂದಿಗೆ ಚರ್ಚಿಸಿದ್ದು, ಈ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗು ವುದು’ ಎಂದು ರಾಜು ಮೊಗವೀರ ಹೇಳಿದರು.

***
ಸಂಕಷ್ಟದಲ್ಲಿರುವ ಭತ್ತ ಬೆಳೆಗಾರರ ಸಾಲಮನ್ನಾ ಮಾಡಿ ಸರ್ಕಾರ ರೈತರ ನೆರವಿಗೆ ಬರಬೇಕು. ರೈತರು ಹೊರ ಊರುಗಳಿಗೆ ಗುಳೆ ಹೋಗುವುದನ್ನು ತಪ್ಪಿಸಬೇಕು.
-ಭೈರವ ಕಾಮತ, ಕಾಳಂಗಿ ಸೊಸೈಟಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.