ಮುಂಡಗೋಡ: `ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಬಿಜೆಪಿಯಲ್ಲಿಯೇ ಇರುತ್ತೇನೆ. ಗೋವಾದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ~ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ವಿ.ಎಸ್.ಪಾಟೀಲ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಾನು ಗೋವಾಕ್ಕೆ ಹೋಗಿದ್ದು ರಾಜಕೀಯ ಚರ್ಚೆ ನಡೆಸಲು ಅಲ್ಲ. ಕಳೆದ ಹಲವು ದಿನಗಳಿಂದ ಸಚಿವ ಆನಂದ ಅಸ್ನೋಟಿಕರ ಅವರನ್ನು ಭೇಟಿಯಾಗಿಲ್ಲ. ನಾನು ಅಸ್ನೋಟಿಕರ ಜೊತೆಗೂಡಿ ಕಾಂಗ್ರೆಸ್ ಸೇರುತ್ತಿದ್ದೇವೆ ಎನ್ನುವುದು ಸುಳ್ಳು. ನಾನು ಬಿಜೆಪಿಯಲ್ಲಿಯೇ ಉಳಿಯುತ್ತೇನೆ. ಕೆಜೆಪಿಗೂ ಹೋಗುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.
ಯಾರೂ ಪಕ್ಷ ಬಿಡುವುದಿಲ್ಲ: ಕಾಗೇರಿ
ಸಿದ್ದಾಪುರ: `ಶಿವಾನಂದ ನಾಯ್ಕ, ಶಶಿಭೂಷಣ ಹೆಗಡೆ ಸೇರಿದಂತೆ ಜಿಲ್ಲೆಯ ಯಾವುದೇ ಮುಖಂಡರೂ ಬಿಜೆಪಿ ಬಿಡುವುದಿಲ್ಲ. ಅವರೆಲ್ಲರ ಉಪಸ್ಥಿತಿಯಲ್ಲಿಯೇ ಚುನಾವಣೆ ನಡೆಸಲಿದ್ದೇವೆ~ ಎಂದು ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲ್ಲೂಕಿನ ನೆಲೆಮಾಂವ್ನಲ್ಲಿ ಶುಕ್ರವಾರ ಕುಡಿಯುವ ನೀರು ಯೋಜನೆಯ ಉದ್ಘಾಟನೆಯ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರು ಈ ಬಗ್ಗೆ ಪ್ರಶ್ನೆ ಮಾಡಿದಾಗ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು. `ಈ ಎಲ್ಲರಿಗೂ ಪಕ್ಷವೇ ಸ್ಥಾನಮಾನ ನೀಡಿದೆ.ಆದ್ದರಿಂದ ಅವರುಗಳು ಪಕ್ಷ ತ್ಯಜಿಸಲಾರರು ಎಂಬ ವಿಶ್ವಾಸವಿದೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.