ADVERTISEMENT

ಭಾವಚಿತ್ರಕ್ಕೆ ಸ್ಟಿಕ್ಕರ್‌ ಅಂಟಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 9:36 IST
Last Updated 6 ಏಪ್ರಿಲ್ 2018, 9:36 IST

ಕಾರವಾರ: ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಡಿತರ ತೊಗರಿ ಬೇಳೆಯ ಪೊಟ್ಟಣಗಳ ಮೇಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಗಳಿಗೆ ಸ್ಟಿಕ್ಕರ್‌ ಅಂಟಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚನೆ ಹೊರಡಿಸಿದೆ.

‘ನ್ಯಾಯಬೆಲೆ ಅಂಗಡಿಗಳಲ್ಲಿ ಹಾಗೂ ಸಗಟು ಮಳಿಗೆಗಳಲ್ಲಿ ಇರುವ ಪಡಿತರದ ತೊಗರಿ ಬೇಳೆ ಪೊಟ್ಟಣದ ಮೇಲೆ ಮುಖ್ಯಮಂತ್ರಿ ಅವರ ಭಾವಚಿತ್ರ ಇದೆ. ನೀತಿ ಸಂಹಿತೆ ಇರುವುದರಿಂದ ಇದನ್ನು ವಿತರಿಸಲು ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹಾಸನ ಜಿಲ್ಲೆಯ ಉಪನಿರ್ದೇಶಕರು ತಿಳಿಸಿದ್ದರು. ಅದರಂತೆ ಸಗಟು ಮಳಿಗೆಗಳಲ್ಲಿ ಬಾಕಿ ಉಳಿದಿರುವ ಪೊಟ್ಟಣಗಳ ಮೇಲೆ ಸ್ಟಿಕ್ಕರ್‌ ಅಂಟಿಸಿದ ಬಳಿಕ ನ್ಯಾಯಬೆಲೆ ಅಂಗಡಿಗಳಲ್ಲಿ ಅದನ್ನು ವಿತರಣೆ ಮಾಡಬೇಕು’ ಎಂದು ಇಲಾಖೆಯ ಆಯುಕ್ತರು ರಾಜ್ಯದ ಎಲ್ಲ ಉಪನಿರ್ದೇಶಕರಿಗೆ ಸುತ್ತೋಲೆ ರವಾನಿಸಿದ್ದಾರೆ.

‘ಏಪ್ರಿಲ್ ತಿಂಗಳಿಗೆ ಬೇಕಾದ ತೊಗರಿ ಬೇಳೆಯ ಪೊಟ್ಟಣಗಳ ಮೇಲೆ ಯಾವುದೇ ಭಾವಚಿತ್ರಗಳನ್ನು ಮುದ್ರಿಸದಂತೆ ಈಗಾಗಲೇ ಪೊಟ್ಟಣಗಳ ತಯಾರಿಕಾ ಸಂಸ್ಥೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ ಸೂಚಿಸಲಾಗಿದೆ. ಒಂದು ವೇಳೆ ಈ ತಿಂಗಳ ತೊಗರಿ ಬೇಳೆಯ ದಾಸ್ತಾನು ಪೊಟ್ಟಣ ಭಾವಚಿತ್ರದೊಂದಿಗೆ ವಿತ ರಣೆಯಾಗಿದ್ದಲ್ಲಿ ಅದನ್ನು ತಕ್ಷಣ ಸಗಟು ವಿತರಕರಿಗೆ ಹಿಂದಿರುಗಿಸಿ, ಭಾವಚಿತ್ರವಿಲ್ಲದ ಪೊಟ್ಟಣಗಳನ್ನು ಪಡೆ ಯುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಮರೆಯಾಗದ ಇಂದಿರಾ ಭಾವಚಿತ್ರ: ನಗರದ ಆಹಾರ ಇಲಾಖೆಯ ಸಗಟು ಮಳಿಗೆಯ ಬಳಿ ಅಳವಡಿಸಲಾಗಿರುವ ರಾಜ್ಯ ಸರ್ಕಾರದ ಯೋಜನೆಗಳ ಪ್ರಚಾರದ ಬ್ಯಾನರ್‌ವೊಂದರಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರ ಮರೆಮಾಚದೆ ಇಡಲಾಗಿದೆ.

ಬ್ಯಾನರ್‌ನಲ್ಲಿದ್ದ ರಾಜಕೀಯ ನಾಯಕರ ಫೊಟೊಗಳನ್ನು ತೆಗೆಯಲಾಗಿದೆ. ಆದರೆ ಅದರಲ್ಲಿರುವ ಇಂದಿರಾ ಕ್ಯಾಂಟೀನ್‌ನ ಎರಡು ಚಿತ್ರದಲ್ಲಿಯೂ ಇಂದಿರಾ ಗಾಂಧಿ ಅವರ ಭಾವಚಿತ್ರವಿದೆ. ಅವರು ಪಕ್ಷದ ನಾಯಕಿಯಾಗಿದ್ದ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಭಾವಚಿತ್ರಗಳನ್ನು ತೆಗೆಯಲಾಗಿದೆ.‘ಈಗಾಗಲೇ ನಿಧನ ಹೊಂದಿರುವ ರಾಜಕೀಯ ನಾಯಕರುಗಳ ಭಾವಚಿತ್ರವು ನೀತಿ ಸಂಹಿತೆಗೆ ಒಳಪಡುವುದಿ‌ಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಆದರೆ ಇಂದಿರಾ ಗಾಂಧಿ ಅವರ ಭಾವಚಿತ್ರದ ಕುರಿತಾಗಿ ಈಗಾಗಲೇ ಆಯೋಗದ ಬಳಿ ಪ್ರಶ್ನೆ ಇಟ್ಟಿದ್ದೇವೆ. ಅಲ್ಲಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.