ಶಿರಸಿ: ಮಲೆನಾಡಿನ ತಿರುಪತಿ ಎಂದೇ ಪ್ರಸಿದ್ಧಿ ಹೊಂದಿರುವ ತಾಲ್ಲೂಕಿನ ಮಂಜುಗುಣಿ ವೆಂಕಟರಮಣ ದೇವರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ವೆಂಕಟರಮಣ ದೇವರಿಗೆ ಹಣ್ಣು-ಕಾಯಿ ಸೇವೆ ಅರ್ಪಿಸಿದರು.ರಥೋತ್ಸವದ ಅಂಗವಾಗಿ ಪ್ರಾತಃಕಾಲದಲ್ಲಿ ಮಹಾರಥ ಶುದ್ಧಿ, ರಥಪೂಜೆ, ರಥಬಲಿ, ರಥಾರೋಹಣದ ನಂತರ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಿಗ್ಗೆಯಿಂದಲೇ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಜನರು ಸರದಿಯಲ್ಲಿ ನಿಂತು ದೇವರಿಗೆ ಹಣ್ಣು-ಕಾಯಿ, ವಿವಿಧ ಸೇವೆ ಅರ್ಪಿಸಿದರು.
ನೆತ್ತಿ ಸುಡುವ ಬಿಸಿಲಿನಲ್ಲೂ ಭಕ್ತರ ಸಾಲು ಒಂದು ಕಿ.ಮೀ.ವರೆಗೆ ತಲುಪಿತ್ತು. ಹಲವು ಭಕ್ತರು ರಥಕ್ಕೆ ಕಡಲೆಕಾಯಿ, ಬಾಳೆಹಣ್ಣು ಎಸೆದು ಸೇವೆ ಸಮರ್ಪಿಸಿದರು. ಅಡಿಕೆ ಬೆಳೆಗಾರರು ಹರಕೆಯಾಗಿ ಅಡಿಕೆ, ಕಾಳುಮೆಣಸು, ಯಾಲಕ್ಕಿ ಅರ್ಪಿಸಿ ಕೃತಾರ್ಥರಾದರು.
ಮಂಜುಗುಣಿಯ ರಥ ಅತಿದೊಡ್ಡ ತಿರುಗುಣಿ ರಥವಾಗಿದೆ. ಮಂಜುಗುಣಿ ರಥೋತ್ಸವದಂದು ತಿರುಪತಿಯಿಂದ ಸಾಕ್ಷಾತ್ ತಿಮ್ಮಪ್ಪನೇ ಇಲ್ಲಿಗೆ ಆಗಮಿಸುವನು ಎಂಬುದು ಭಕ್ತರ ನಂಬಿಕೆ. ಹೀಗಾಗಿ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ರಥಾರೂಢ ವೆಂಕಟರಮಣನಿಗೆ ಪೂಜೆ ಸಲ್ಲಿಸಿದರು.
ಈ ನಂಬಿಕೆಗೆ ಪುಷ್ಠಿ ಎಂಬಂತೆ ಮಂಜುಗುಣಿ ರಥೋತ್ಸವದ ದಿನ ತಿರುಪತಿ ದೇವಾಲಯದಲ್ಲಿ ತಿಮ್ಮಪ್ಪನಿಗೆ ಸೇವೆ ಇರುವುದಿಲ್ಲ. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶ್ರುಕವಾರ ನಸುಕಿನಲ್ಲಿ ನಡೆಯುವ ರಥ ಎಳೆಯುವ ಕಾರ್ಯಕ್ರಮ ಗುರುವಾರ ಸಂಜೆಯೇ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.