ADVERTISEMENT

ಮರಗಳ ಮಾರಣಹೋಮ

ಗಂಧ, ಸಾಗವಾನಿ, ಮತ್ತಿ ಬುಡಗಳಿಗೆ ಕೊಡಲಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 7:16 IST
Last Updated 5 ಸೆಪ್ಟೆಂಬರ್ 2013, 7:16 IST

ಮುಂಡಗೋಡ: ಅಕ್ರಮವಾಗಿ 20ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಿದ ಘಟನೆ ತಾಲ್ಲೂಕಿನ ಬಾಚಣಕಿ ಜಲಾಶಯದ ಸಮೀಪ ಬೆಳಕಿಗೆ ಬಂದಿದೆ.

ಬಾಚಣಕಿ ಜಲಾಶಯದ ಸನಿಹವಿರುವ ಹಿರೇಬಾಚಣಕಿ ಸ.ನಂ.104ರಲ್ಲಿ ಒಂದು ಗಂಧದ ಗಿಡವೂ ಸೇರಿದಂತೆ ಸಾಗವಾನಿ, ಮತ್ತಿ ಹಾಗೂ ಇನ್ನಿತರ ಜಾತಿಯ ಮರಗಳನ್ನು ಕಡಿಯಲಾಗಿದೆ. ಮರಗಳನ್ನು ಕಡಿದು ನಂತರ ಅವುಗಳ ಬುಡಚಿ(ಗಿಡದ ತಳಭಾಗ) ಕಾಣಬಾರದೆಂಬ ಉದ್ದೇಶದಿಂದ ಬಿದಿರಿನ ಪದರು ಹಾಗೂ ಗಿಡಗಂಟಿಗಳನ್ನು ಹಾಕಿ ಮುಚ್ಚಿರುವದು ಕಂಡುಬಂದಿದೆ. ಕಡಿದ ಮರಗಳಲ್ಲಿ ಬೆಲೆಬಾಳುವ ಮರದ ತುಂಡುಗಳನ್ನು ಸಾಗಿಸಿ ಉಳಿದವುಗಳನ್ನು ಅಲ್ಲಿಯೇ ಜೋಡಿಸಿಡಲಾಗಿದೆ ಎನ್ನಲಾಗಿದೆ.

ಹುಬ್ಬಳ್ಳಿ-ಶಿರಸಿ ರಾಜ್ಯ ಹೆದ್ದಾರಿ ಪಕ್ಕವೇ ಈ ಘಟನೆ ನಡೆದಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಅಲ್ಲಿಸಾಬ ಮಜ್ಜಿಗೇರಿ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ರಾಜ್ಯ ಹೆದ್ದಾರಿ ಪಕ್ಕದ ಸ.ನಂ.104ರಲ್ಲಿ ಅಕ್ರಮವಾಗಿ ಮರಗಳನ್ನು ಕಡಿದಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದ್ದು ಮಾಲ್ಕಿ ಜಾಗದಲ್ಲಿನ ಮರಗಳನ್ನು ಕಡಿಯಲಾಗಿದೆ ಎನ್ನುತ್ತಿರುವ ಸಂಬಂಧಿಸಿದ ಮಾಲೀಕನಿಗೆ ಅಗತ್ಯ ದಾಖಲೆಗಳನ್ನು ಪೂರೈಸುವಂತೆ ಸೂಚಿಸಲಾಗಿದೆ.

ಮಾಲ್ಕಿ ಜಾಗವಿದ್ದರೂ ಸಹಿತ ಅರಣ್ಯ ಇಲಾಖೆಯ ಅನುಮತಿ ಪಡೆದೇ ಕಡಿಯಬೇಕಾಗುತ್ತದೆ. ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಎಫ್ ವಿ.ಆರ್.ಬಸನಗೌಡರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.