ಸಿದ್ದಾಪುರ: ಅಂತರರಾಷ್ಟ್ರೀಯ ಖ್ಯಾತಿಯ ವಯೋಲಿನ್ವಾದಕಿ ಮುಂಬಯಿನ ಎನ್.ರಾಜಂ ಮತ್ತು ತಂಡದವರಿಂದ `ಪರಂಪರಾ~ ಎಂಬ ಸಂಗೀತ ಕಾರ್ಯಕ್ರಮ ಮತ್ತು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತಾಲ್ಲೂಕಿನ `ಮುರಳೀವನ~ ಸಂಸ್ಥೆಯ ಉದ್ಘಾಟನಾ ಸಮಾರಂಭವು ಪಟ್ಟಣದ ಶಂಕರಮಠದಲ್ಲಿ ಇದೇ 14ರಂದು ಸಂಜೆ 5ಕ್ಕೆ ನಡೆಯಲಿದೆ ಎಂದು `ಮುರಳೀವನ~ ಸಂಸ್ಥೆಯ ಸಂಚಾಲಕ ಕಿರಣ ಹೆಗಡೆ ಮಘೇಗಾರ ತಿಳಿಸಿದರು.
ಬುಧವಾರ ಇಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಸ್ಥಳೀಯ ಶಂಕರ ಮಠದ ಸಂಸ್ಕೃತಿ ಸಂಪದದ ಸಹಯೋಗದಲ್ಲಿ ನಡೆ ಯುವ ಈ ಸಂಗೀತ ಕಾರ್ಯಕ್ರಮ ವಿಶಿಷ್ಟವಾಗಿದ್ದು, ಇದರಲ್ಲಿ ಎನ್. ರಾಜಂ ಅವರೊಂದಿಗೆ ಅವರ ಮಗಳು ಡಾ.ಸಂಗೀತಾ ಶಂಕರ್ ಮತ್ತು ಮೊಮ್ಮಕ್ಕಳಾದ ರಾಗಿಣಿ ಶಂಕರ ಮತ್ತು ನಂದಿನಿ ಶಂಕರ ಭಾಗವಹಿ ಸುವರು. ಆದ್ದರಿಂದ ಮೂರು ತಲೆ ಮಾರಿನ ಸಂಗೀತ ಪರಂಪರೆಯನ್ನು ಪರಿಚಯಿಸುವ ಕಾರ್ಯಕ್ರಮವಿದು. ಈ ರೀತಿಯ ಅಪರೂಪದ ಕಾರ್ಯ ಕ್ರಮ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದೆ ಎಂದರು.
ಇದಲ್ಲದೇ ಕಾರ್ಯಕ್ರಮದಲ್ಲಿ ಖ್ಯಾತ ತಬಲಾವಾದಕರಾದ ಪಂಡಿತ್ ರವೀಂದ್ರ ಯಾವಗಲ್ ಮತ್ತು ಗುರು ಮೂರ್ತಿ ವೈದ್ಯ ಅವರುಗಳ ತಬಲಾ ವಾದನ ಮತ್ತು ಕಿರಣ ಹೆಗಡೆ ಮಘೇ ಗಾರ ಅವರ ಬಾನ್ಸುರಿ (ಕೊಳಲು) ಕಚೇರಿ ಕೂಡ ನಡೆಯಲಿದೆ ಎಂದರು.
ಕಾರ್ಯಕ್ರಮಗಳು: ಅಂದು ಸಂಜೆ 5ಕ್ಕೆ `ಮುರಳೀವನ~ ಸಂಸ್ಥೆಯನ್ನು ಎನ್.ರಾಜಂ ಉದ್ಘಾಟಿಸುವರು. ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸುವರು. ಪಟ್ಟಣದ ಶ್ರೇಯಸ್ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ ವೈದ್ಯ ಮುಖ್ಯಅತಿಥಿಗಳಾಗಿ ಉಪಸ್ಥಿತರಿರು ವರು. ನಂತರ ರಾತ್ರಿ 9ರವರೆಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
`ಈ ಸಂಸ್ಥೆಯನ್ನು ಭಾರತೀಯ ಸಂಗೀತ,ಸಂಸ್ಕೃತಿ ಮತ್ತು ಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರಾರಂಭಿಸುತ್ತಿದ್ದೇವೆ. ಈ ಸಂಸ್ಥೆಯ ಆಶ್ರಯದಲ್ಲಿ ಮುಂದೆ ಸಂಗೀತದ ತರಗತಿ ನಡೆಸುವ ಯೋಚನೆಯೂ ಇದೆ~ ಎಂದರು. ಈ ಸಂಗೀತಗಾರರ ತಂಡದವರಿಂದ ಇದೇ 15ರಂದು ರಾತ್ರಿ ನೆರೆಯ ಸಾಗರದಲ್ಲಿ ಮತ್ತು 16ರಂದು ಕುಮಟಾದಲ್ಲಿ ಸಂಗೀತ ಕಚೇರಿಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ `ಮುರಳೀ ವನ~ ಸಂಸ್ಥೆಯ ಪದಾಧಿಕಾರಿಗಳಾದ ಸಿ.ವಿ.ಹೆಗಡೆ ಮಘೇಗಾರ ಮತ್ತು ನಂದನ ಹೆಗಡೆ ಮಘೇಗಾರ ಉಪಸ್ಥಿತ ರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.