ಶಿರಸಿ: ಒಂದೇ ಕುಟುಂಬದ ಆರು ಮಕ್ಕಳು ಸೇರಿದಂತೆ 15 ಜನರು ವಿಷಯುಕ್ತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿನ ಮಹಾಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರು ಮಕ್ಕಳ ಚೇತರಿಸಿಕೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ಮೂಲತಃ ಹಾನಗಲ್ ತಾಲ್ಲೂಕಿನ ಶಿಗ್ಗಾವಿ ಹಾಗೂ ಮುಂಡಗೋಡ ತಾಲ್ಲೂಕಿನ ಪಾಳಾ ಸಮೀಪ ಕಲಕೊಪ್ಪ ನದೀಂ ಸಲೀಂ ಸಾಬ್, ತಸ್ಮಿಯಾ, ಜಹೀರಖಾನ್, ಮಹಮ್ಮದ್ ಖಾಸಿಂ, ಸುಹೇಲ್ ರಜಾಕ್ ಹಾಗೂ ಅರ್ಪ್ಾ ಅಸ್ವಸ್ಥಗೊಂಡಿದ್ದ ಮಕ್ಕಳು.
ಕಲಕೊಪ್ಪ ಹಳ್ಳಿಗೆ ಸಂಬಂಧಿಗಳ ಮನೆಗೆ ಆಗಮಿಸಿದಾಗ ಆಹಾರ ಸೇವನೆ ನಂತರ ಅವರಿಗೆ ಈ ತೊಂದರೆ ಕಾಣಿಸಿಕೊಂಡಿತು. ಮಂಗಳವಾರ ರಾತ್ರಿ ವೇಳೆಗೆ ಮಕ್ಕಳಿಗೆ ವಾಂತಿ ಬೇಧಿ ಕಾಣಿಸಿಕೊಂಡಾಗ ಅಸ್ವಸ್ಥಗೊಂಡ ಮಕ್ಕಳನ್ನು ಮಳಗಿ ಪ್ರಾಥಮಿಕ ಆರೋಗ್ಯಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾದರೂ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದುದರಿಂದ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ಕರೆ ತರಲಾಯಿತು.
ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳ ಆರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಉಳಿದವರನ್ನು ಹಾನಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯವೂ ಚೇತರಿಸಿದೆ ಎಂದು ಅವರು ಸಂಬಂಧಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.