ADVERTISEMENT

ಶಾಲೆ ಉಳಿಸಿಕೊಳ್ಳಲು ಕೈಜೋಡಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 9:30 IST
Last Updated 18 ಜುಲೈ 2012, 9:30 IST

ಕುಮಟಾ: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆಯೇ ರದ್ದಾಗುವ ಪ್ರಸಂಗ ಒದಗಿದಾಗ ಬೇರೆ ಬೇರೆ ತಾಲ್ಲೂಕುಗಳಲ್ಲಿ ಓದುತ್ತಿರುವ ಊರಿನ ವಿದ್ಯಾರ್ಥಿಗಳನ್ನು ಕರೆತಂದು ಸೇರಿಸುವ ಮೂಲಕ ಶಾಲೆ ಉಳಿಸುವ ಪ್ರಯತ್ನಕ್ಕೆ ತಾಲ್ಲೂಕಿನ ಖಂಡಗಾರ ಕೂಡಗುಂಡಿ ಗ್ರಾಮಸ್ಥರು ಕೈ ಜೋಡಿಸಿದ್ದಾರೆ.

ಕೂಡಗುಂಡಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ 10 ವಿದ್ಯಾರ್ಥಿಗಳು ಓದುತ್ತಿರುವುದರಿಂದ ಸರಕಾರಿ ನಿಯಮದ ಪ್ರಕಾರ ಶಾಲೆಯೇ ರದ್ದಾಗುವ ಭಯ ಗ್ರಾಮಸ್ಥರಲ್ಲಿ ಮನೆ ಮಾಡಿತು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಈಶ್ವರ ನಾಯ್ಕ ನೇತೃತ್ವದಲ್ಲಿ ಇತ್ತೀಚೆಗೆ ಗ್ರಾಮಸ್ಥರೆಲ್ಲ ಸಭೆ ಸೇರಿ ಬೇರೆ ಊರು ಹಾಗೂ ತಾಲ್ಲೂಕುಗಳಲ್ಲಿ ಓದುತ್ತಿರುವ ತಮ್ಮೂರಿನ ವಿದ್ಯಾರ್ಥಿಗಳನ್ನು ವಾಪಸು ಕರೆತಂದು  ಊರ ಶಾಲೆಗೆ ಸೇರಿಸಲು ಎಲ್ಲರೂ ಕೈಜೋಡಿಸುವ ಬಗ್ಗೆ ಇತ್ತೀಚೆಗೆ ಗ್ರಾಮಸ್ಥರು ನಡೆಸಿದ ಸಭೆಯಲ್ಲಿ ನಿರ್ಣಯ ಕೈಕೊಂಡಿದ್ದಾರೆ.

ತಮ್ಮ ಊರಿನ ಮಕ್ಕಳ ಶೈಕ್ಷಣಿಕ ಕಾಳಜಿಯ ವಿಷಯ ತಿಳಿದ ಶಾಸಕ ದಿನಕರ ಶೆಟ್ಟಿ ಅವರು ಮಂಗಳವಾರ ಇಲ್ಲಿ ಕರೆದ ಸಭೆಯಲ್ಲಿ ಗ್ರಾಮಸ್ಥರ ಪ್ರಯತ್ನಕ್ಕೆ ಫಲ ದೊರಕುವರೆಗೆ ಒಂದು ವರ್ಷದ ಮಟ್ಟಿಗೆ ಕೂಡಗುಂಡಿ ಶಾಲೆಯನ್ನು ರದ್ದುಮಾಡದೆ ಹಾಗೇ ಮುಂದುವರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಗಳಿಗೆ ಪತ್ರ ಬರೆಯಲು ನಿರ್ಣಯಿಸಿದ್ದಾರೆ.

ಖಂಡಗಾರಕ್ಕೆ ನಿತ್ಯ ಬಿಡುವ ಬಸ್ಸು ಒಂದು ಗಂಟೆ ತಡವಾಗಿ ಹೋಗುತ್ತಿದ್ದು, ಅಲ್ಲಿಂದ ಪಟ್ಟಣಕ್ಕೆ ಹೈಸ್ಕೂಲು ಹಾಗೂ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ  ಅನುಕೂಲವಾಗುವಂತೆ ಬೆಳಿಗ್ಗೆ 8.30ಕ್ಕೆ ಬಸ್ಸು ಉರು ತಲುಪುವ ಬಗ್ಗೆ  ಕ್ರಮ ಕೈಕೊಳ್ಳಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿದೆ.

ಬಸ್ ಓಡಾಡುವ ರಸ್ತೆಗೆ ಅಡ್ಡಿಯಾಗಿರುವ ಮರದ ಕೊಂಬೆಗಳನ್ನೂ ಕಡಿಯುವ ಬಗ್ಗೆಯೂ ಅರಣ್ಯ ಇಲಾಖೆ ಅಧಿಕಾರಿ ಅವರಿಗೆ ತಿಳಿಸಲಾಗುವುದು ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.

ಜಿ.ಪಂ. ಸದಸ್ಯ ಪ್ರದೀಪ ನಾಯಕ, ತಾ.ಪಂ. ಉಪಾಧ್ಯಕ್ಷ ಈಶ್ವರ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಉದಯ ನಾಯ್ಕ, ನಾರಾಯಣ ನಾಯ್ಕ ಹಾಗೂ ಗಣಪತಿ ಪಟಗಾರ ಮೊದಲಾದರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.