ADVERTISEMENT

ಸಂಭ್ರಮದ ಶಿರ್ವೆ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 8:15 IST
Last Updated 19 ಜನವರಿ 2012, 8:15 IST

ಕಾರವಾರ: ತಾಲ್ಲೂಕಿನ ಶಿರ್ವೆ ಗುಡ್ಡದ ಸಿದ್ದರಾಮೇಶ್ವರ ಜಾತ್ರೆ ಸಾವಿರಾರು ಭಕ್ತಾದಿಗಳ ಮಧ್ಯೆ ಸೋಮವಾರ ನಡೆಯಿತು. ಗುಡ್ಡದ ತಪ್ಪಲಿನಲ್ಲಿರುವ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡಿದ್ದವು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಭಕ್ತರು ಸಿದ್ದರಾಮೇಶ್ವರನಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು.

ತಾಲ್ಲೂಕಿನ ಅಮದಳ್ಳಿ ಗ್ರಾಮದ ವೀರಶೈವರು ಬಂದು ಪೂಜೆ ಸಲ್ಲಿಸಿದ ನಂತರ ಧಾರ್ಮಿಕ ಕಾರ್ಯಕ್ರಮಗಳ ಆರಂಭವಾಯಿತು. ಉಳವಿ ಕ್ಷೇತ್ರದ ನಂತರ ಶಿವಶರಣರು ಸಂಬಂಧ ಹೊಂದಿದ ಎರಡನೇಯ ಪುಣ್ಯ ಸ್ಥಳ ಇದಾಗಿದೆ.

ಭಕ್ತರು, ಕುಳಾವಿಗಳು ಸಂಜೆ ಪಲ್ಲಕ್ಕಿ ಯನ್ನು ಗುಡ್ಡದ ಮೇಲೆ ತೆಗೆದು ಕೊಂಡು ನಿರ್ದಿಷ್ಟ ಸ್ಥಳದಲ್ಲಿಟ್ಟು ಬೆಳಗಿನ ಜಾವ ಮೂರು ಗಂಟೆ ಸುಮಾ ರಿಗೆ ಶಿರ್ವೆ ಗುಡ್ಡದ ತುದಿಯಲ್ಲಿರುವ ನಂದಿಗೆ ದೀಪ ಹಚ್ಚಿ ಪೂಜೆ ಸಲ್ಲಿಸು ತ್ತಾರೆ.

ನಂತರ ಭಕ್ತರು ಪೂಜೆ ಸಲ್ಲಿಸು ತ್ತಾರೆ. ಈ ಸ್ಥಳ ಸಮುದ್ರಮಟ್ಟದಿಂದ ಅಂದಾಜು ಎರಡು ಸಾವಿರ ಅಡಿ ಎತ್ತರದಲ್ಲಿದೆ. ಗುಡ್ಡದಿಂದ ನೋಡಿದರೆ ಕೆಳಗಿರುವ ಮನುಷ್ಯರು ಇರುವೆಗಳಂತೆ ಗೋಚರಿಸುತ್ತಾರೆ.

ಗುಡ್ಡ ಭಯಾನಕ ಸ್ವರೂಪದಲ್ಲಿ ನಿಂತಿರುವುದರಿಂದ ಒಬ್ಬೊಬ್ಬರೇ ಗುಡ್ಡದ ತುದಿಗೆ ಹೋಗಿ ಪೂಜೆ ಸಲ್ಲಿಸ ಬೇಕು. ಸ್ವಲ್ಪ ಆಯತಪ್ಪಿದರೂ ಅಪಾಯತಪ್ಪಿದಲ್ಲ. ಈ ಗುಡ್ಡದ ಮೇಲೆರಲು ಹಿಂದೆ ಕಟ್ಟಿಗೆಯ ಏಣಿ ಇತ್ತು. ಈಗ ಕೈಗಾ ಅಣು ವಿದ್ಯುತ್ ಸ್ಥಾವರದವರು ಕಬ್ಬಿಣದ ಏಣಿ ಯೊಂದನ್ನು ಮಾಡಿಕೊಟ್ಟಿದ್ದಾರೆ.

ಹಿನ್ನೆಲೆ: ಪೋರ್ಚುಗಿಸರ ಹಡಗೊಂದು ಅರಬ್ಬಿ ಸಮುದ್ರದಲ್ಲಿ ದಿಕ್ಕು ತಪ್ಪಿತು. ಜಾತ್ರೆಯ ಸಂದರ್ಭದಲ್ಲಿ ಈ ಗುಡ್ಡದಲ್ಲಿ ಬೆಳಗಿದ ದೀಪವೊಂದು ಕಂಡ ಹಡಗಿನ ನಾವಿಕರು ದೀಪ ಇರುವ ಸ್ಥಳ ತೀರ ಪ್ರದೇಶವೆಂದು ಅದರ ಆಧಾರದ ಮೇಲೆಯ ದಡಕ್ಕೆ ಬಂದರು. ಅಂದಿನಿಂದ ಪೋರ್ಚುಗೀಸ ಸರಕಾರ ದೀಪದ ಎಣ್ಣೆಯನ್ನು ಜಾತ್ರೆಯ ಸಂದರ್ಭದಲ್ಲಿ ದಾನ ನೀಡುತ್ತಿತ್ತು. ಈ ಪದ್ಧತಿ ಈಗ ನಿಂತು ಹೋಗಿದೆ.

ಸಾವಿರಾರು ಆಸ್ತಿಕರಿಗೆ ದೈವಶಕ್ತಿಯ ನೆಲೆಯಾದರೆ, ಚಾರಣಿಗರಿಗೆ ಗುಡ್ಡ ಏರುವುದೇ ಒಂದು ಸವಾಲು. ಕಡಿದಾದ ಮಾರ್ಗದಲ್ಲಿ ಹಲವು ಏರು-ತಗ್ಗುಗಳ ನಡುವೆ ಸಾಗುವುದೇ ಒಂದು ವಿಶಿಷ್ಟ ಅನುಭವ ನೀಡುತ್ತದೆ.

ಶಿರ್ವೆಗುಡ್ಡ ವನ್ಯ ಮೃಗಗಳ ಆಗರವೂ ಹೌದು. ಹುಲಿ, ಕರಡಿ ಸೇರಿದಂತೆ ಇನ್ನಿತರ ಪ್ರಾಣಿಗಳ ಚಲನವಲನಗಳನ್ನು ಇಲ್ಲಿ ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.