ADVERTISEMENT

ಸಾಲೆಮನೆ ಶಾಲೆಗೆ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 7:40 IST
Last Updated 15 ಏಪ್ರಿಲ್ 2011, 7:40 IST
ಸಾಲೆಮನೆ ಶಾಲೆಗೆ ಸುವರ್ಣ ಸಂಭ್ರಮ
ಸಾಲೆಮನೆ ಶಾಲೆಗೆ ಸುವರ್ಣ ಸಂಭ್ರಮ   

ಭಟ್ಕಳ: ಶಿಕ್ಷಕಿಯೊಬ್ಬರ ಪರಿಶ್ರಮದಿಂದ ಹಳೆಯ ಕಟ್ಟಡದಲ್ಲಿ  1958ರಲ್ಲಿ ಸ್ಥಾಪನೆಯಾದ ತಾಲ್ಲೂಕಿನ ಶಿರಾಲಿ ಗ್ರಾ.ಪಂ. ವ್ಯಾಪ್ತಿಯ ವೆಂಕಟಾಪುರ ಸಾಲೆಮನೆಯ ಸ.ಹಿ ಪ್ರಾ. ಶಾಲೆಯು ಸುವರ್ಣ ಮಹೋತ್ಸವ ಸಂಭ್ರಮ ಆಚರಿಸಿಕೊಳ್ಳಲಿದೆ.

ಸುವರ್ಣ ಮಹೋತ್ಸವ ಸಮಾರಂಭವು ಏ.15ರಿಂದ 17ರವರೆಗೆ ನಡೆಯಲಿದೆ. ವಿವಿಧ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಸಾಲೆಮನೆ ಗ್ರಾಮಸ್ಥರಿಗೆ ರಸದೌತಣ ನೀಡಲಿವೆ. ನಾರಾಯಣ ಗಣಪಯ್ಯ ಶೆಟ್ಟಿ ವ್ಯವಸ್ಥಾಪಕತ್ವದಲ್ಲಿ, ಸಂಸ್ಥಾಪಕ ಶಿಕ್ಷಕಿ ರುಕ್ಮಿಣಿ ಮೇಸ್ತ್ರಿಯವರ ಪರಿಶ್ರಮದಿಂದ ಆರಂಭವಾದ ಈ ಶಾಲೆಯು 1969ರಲ್ಲಿ ಆರಣ್ಯ ಇಲಾಖೆಯಿಂದ 20 ಗುಂಟೆ ಸ್ಥಳ ಮಂಜೂರಿ ಪಡೆದು, ಗಾಂಧಿಜನ್ಮ ಶತಾಬ್ದಿ ಸಮಯದಲ್ಲಿ ಸ್ವಂತಕಟ್ಟಡ ಹೊಂದಿ ಸರ್ಕಾರಿ ಶಾಲೆಯಾಗಿ ಪರಿವರ್ತನೆಯಾಯಿತು.

ಅಂದಿನಿಂದ ಇಂದಿನವರೆಗೆ ಒಂದು ಶಾಲೆಗೆ ಇರಬೇಕಾದ ಎಲ್ಲಾ ಮೂಲಸೌಲಭ್ಯಗಳನ್ನು ಸರ್ಕಾರದಿಂದ, ದಾನಿಗಳ ನೆರವಿನಿಂದ ಪಡೆದುಕೊಂಡ ಈ ಶಾಲೆಯಲ್ಲಿ ಇಂದು ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಏ.15ರಂದು ಸಂಜೆ 6ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಲಿದ್ದು, ಶಾಸಕ ಜೆ.ಡಿ. ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿ.ಪಂ.ಅಧ್ಯಕ್ಷೆ ಸುಮಾ ಲಮಾಣಿ ಹಸ್ತಪತ್ರಿಕೆ ಬಿಡುಗಡೆ ಮಾಡಲಿದ್ದು, ಸಂಸದ ಅನಂತಕುಮಾರ ಹೆಗಡೆ ಬಿಸಿ ಊಟದ ದಾಸ್ತಾನು ಕೋಣೆ ಉದ್ಘಾಟಿಸಲಿದ್ದಾರೆ. ಏ.16ರಂದು ಸಂಜೆ 6ಕ್ಕೆ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಡಾ.ಆರ್.ವಿ.ಸರಾಫ್ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಹಸೀಲ್ದಾರ್ ರಾಜು ಮೊಗವೀರ ಅಧ್ಯಕ್ಷತೆ ವಹಿಸಲಿದ್ದಾರೆ.

ಏ.17ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೆ.ಎಸ್.ಡಿ.ಎಲ್ ಅಧ್ಯಕ್ಷ ಶಿವಾನಂದ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ.ಸದಸ್ಯ ಮಾಂಕಾಳ ವೈದ್ಯ, ಪುರಸಭೆ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾತ್ರಿ 9.30ರಿಂದ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ‘ತಾಳಿ ಕಟ್ಟಿದರೂ ಗಂಡನಲ್ಲ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.