ಕಾರವಾರ: ‘ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾಕ್ಕೆ ಸಂಬಂಧಿಸಿ ಬುಧವಾರ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಸುಮಾರು 15 ಜಿಲ್ಲೆಗಳ ಪ್ರಮುಖರಿಗೆ ಮಾತನಾಡಲು ಅವಕಾಶವೇ ನೀಡಿಲ್ಲ’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವಕರ ಅಸಮಾಧಾನ ವ್ಯಕ್ತಪಡಿಸಿದರು.
‘ರೈತರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕಾಗಿ ಈ ಸಭೆಯನ್ನು ಕರೆಯಲಾಗಿತ್ತು. ಜಿಲ್ಲೆಯಿಂದ ಐವರು ಇಲ್ಲಿನ ಪರಿಸ್ಥಿತಿಯನ್ನು ಅವರಿಗೆ ಮನನ ಮಾಡುವ ಕಾತುರದಲ್ಲಿ ಬೆಂಗಳೂರಿಗೆ ತೆರಳಿದ್ದೆವು. ಆದರೆ, ಆ ಸಭೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ರೈತ ಮುಖಂಡರಿಗೆ ಹಾಗೂ ವಿವಿಧ ಪಕ್ಷಗಳನ್ನು ದೂರುವವರಿಗೆ ಮಾತ್ರ ಅವಕಾಶ ನೀಡಲಾಯಿತು. ಜತೆಗೆ, ಇಲ್ಲಿನ ರೈತರ ಪರಿಸ್ಥಿತಿಯ ಕುರಿತಾಗಿ ನಾವು ಸಿದ್ಧಪಡಿಸಿದ್ದ ಮನವಿಯನ್ನೂ ಮುಖ್ಯಮಂತ್ರಿ ಸ್ವೀಕರಿ ಸಿಲ್ಲ’ ಎಂದು ಗುರುವಾರ ಸುದ್ದಿ ಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ರೈತರ ಮುಖಂಡರ ಸಭೆಯಲ್ಲಿಯೂ ನಮ್ಮ ವಾದಗಳನ್ನು ಮಂಡಿಸಲು ಬಿಡದೇ, ಸಾಲ ಮನ್ನಾಕ್ಕೆ ಇನ್ನೂ 15 ದಿನಗಳು ಬೇಕು ಎಂದು ಹೇಳುತ್ತಿರುವ ಮುಖ್ಯಮಂತ್ರಿಯವರ ಮಾತಿನ ಮೇಲೆ ಸಂಶಯ ಮೂಡುತ್ತಿದೆ’ ಎಂದರು. ಇಲ್ಲಿನ ರೈತರ ಬೆಳೆ ಸಾಲ, ಮಾಧ್ಯಮಿಕ ಹಾಗೂ ಆಸಾಮಿ ಸಾಲವನ್ನೂ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕರಾವಳಿಯಲ್ಲಿ ಮೀನುಗಾರಿಕೆ ವೃತ್ತಿ ನಂಬಿ ಜೀವನ ಸಾಗಿಸುವ ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಮೀನುಗಾರರನ್ನು, ಕಲ್ಲಂಗಡಿ ಬೆಳೆಗಾರರ ಸಾಲವನ್ನೂ ಕೃಷಿ ಸಾಲವೆಂದು ಪರಿಗಣಿಸಿ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.
‘ರೈತರ ಸಮಸ್ಯೆಗಳನ್ನು ಬಗೆಹರಿಸು ವುದಕ್ಕೆ ವಿಶೇಷ ವಿಧಾನಮಂಡಲದ ಅಧಿವೇಶನ ಕರೆಯಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.