ಅಂಕೋಲಾ : ತಾಲ್ಲೂಕಿನ ಹಟ್ಟಿಕೇರಿಯ ಜನತಾ ಕಾಲ ನಿಯ ನಾಗಯಲ್ಲಮ್ಮಾ ದೇವಿಯ ದೇವಸ್ಥಾನದ ಎದುರು ಭಕ್ತಾಧಿಗಳು ಊಟ ಮಾಡಿದ ಎಂಜಲು ಎಲೆಗಳ ಮೇಲೆ ಹರಕೆ ಹೊತ್ತ ಮಹಿಳೆಯರು ಮತ್ತು ಪುರುಷರು ಉರುಳು ಸೇವೆ ನಡೆಸಿದ ಘಟನೆ ಗುರುವಾರ ವಿಜಯದಶಮಿಯಂದು ಜರುಗಿದೆ.
ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿನ ಮಡೆಸ್ನಾನದ ಅಂಧಾನು ಕರಣೆಯಂತೆ ಕಂಡು ಬರುವ ಈ ಆಚರಣೆಯು ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಸುಬ್ರಹ್ಮಣ್ಯ ದೇವಾಲಯದಲ್ಲಿ ಮೇಲ್ಜಾತಿಯ ಸವರ್ಣೀಯರು ಊಟ ಮಾಡಿದ ಎಲೆಗಳ ಮೇಲೆ ಶೂದ್ರ, ಪಂಚಮಾದಿ ಸಮುದಾಯಗಳ ಭಕ್ತಾಧಿಗಳು ಉರುಳಾಡಿ ನಾಡಿನಾದ್ಯಂತ ಚರ್ಚೆಗೆ ಕಾರಣರಾಗಿದ್ದರು.
ಇಲ್ಲಿ ಮಾತ್ರ ಜಾತಿ ಬೇಧವಿಲ್ಲದೇ ಸಹಭೋಜನ ಜರುಗಿದ ಮೇಲೆ ಹರಕೆ ಹೊತ್ತವರು ಉರುಳು ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಸವದತ್ತಿ ಕ್ಷೇತ್ರದ ರೇಣುಕಾ ದೇವಿಯ ಭಕ್ತರಂತೆ ಬಾವಿಯ ನೀರನ್ನು ಸೇದಿಕೊಂಡು ಸ್ನಾನ ಮಾಡಿ, ಭಂಡಾರ ಮತ್ತು ಬೇವಿನ ಸೊಪ್ಪು ಧರಿಸಿಕೊಂಡು ಪೂಜೆ ಪುನಸ್ಕಾರಗಳನ್ನು ನಾಗಯಲ್ಲಮ್ಮಾ ದೇವಿಯ ಮೂರ್ತಿಗೆ ನೆರವೇರಿಸುವ ಭಕ್ತಾಧಿಗಳು ಮೈ ಮೇಲೆ ದೇವಿ ಆವಾಹನೆಯಾದಂತೆ ಆಗಾಗ ವರ್ತಿಸುವುದು ಕಂಡುಬರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.