ADVERTISEMENT

‘ಬೆಳೆ ರಕ್ಷಣೆಗೆ ಮಾರ್ಗೋಪಾಯ ಅಗತ್ಯ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:31 IST
Last Updated 17 ಸೆಪ್ಟೆಂಬರ್ 2013, 6:31 IST

ಸಿದ್ದಾಪುರ: ‘ಅಡಿಕೆ ತೋಟ ಮತ್ತು  ಬೆಳೆಯನ್ನು ಉಳಿಸಿಕೊಳ್ಳಲು ಪರಿಣಾಮ ಕಾರಿಯಾದ ಮಾರ್ಗಗಳನ್ನು  ಸರ್ಕಾರ ಮತ್ತು ಸಂಘ–ಸಂಸ್ಥೆಗಳು ರೂಪಿಸುವ ಅಗತ್ಯವಿದೆ’ ಎಂದು ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್‌. ಭಟ್ಟ ಉಂಚಳ್ಳಿ ಹೇಳಿದರು.
ಹೆಗ್ಗರಣಿಯ ಸೇವಾ ಸಹಕಾರಿ ಸಂಘ, ಕೃಷಿ  ಕೂಟ, ಕ್ಷೇಮಾ ಡಿಸ್ಟ್ರಿಬ್ಯೂಟರ್ಸ್‌  ಆಶ್ರಯದಲ್ಲಿ  ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಹೆಗ್ಗರಣಿಯಲ್ಲಿ ನಡೆದ ತೋಟ–ಪಟ್ಟಿ ಬೆಳೆಗಳ ನಿರ್ವಹಣೆ ಕುರಿತ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ವರ್ಷ ವಿಪರೀತ ಮಳೆಯಿಂದ ಅಡಿಕೆ ಬೆಳೆಯೊಂದಿಗೆ ಅಡಿಕೆ ಮರ  ಗಳನ್ನು ಉಳಿಸಿಕೊಳ್ಳುವುದು ಕಷ್ಟ ವಾಗಿದೆ. ಈ ನಷ್ಟ ತುಂಬಿಕೊಳ್ಳಲು ಸರ್ಕಾರ ಕೂಡಲೆ ವಿಶೇಷ ಪ್ಯಾಕೇಜ್‌ ಬಿಡುಗಡೆ ಮಾಡಬೇಕು. ಅಡಿಕೆ ಬೆಳೆಗೂ ವಿಮೆ ಜಾರಿಯಾಗಬೇಕು’ ಎಂದರು.
ಹೆಗ್ಗರಣಿ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಮಡಿವಾಳ, ನಿಲ್ಕುಂದ ಗ್ರಾ.ಪಂ.ಅಧ್ಯಕ್ಷೆ ಸುನಂದಾ ಗೌಡ, ಕಂಚಿಕೈ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಹೆಗಡೆ, ಶಿಕ್ಷಣ ಸೇವಾ ಸಮಿತಿ ಅಧ್ಯಕ್ಷ ಎನ್‌.ಆರ್‌.ಭಟ್ಟ ಧರೆ, ಕ್ಷೇಮಾ ಡಿಸ್ಟ್ರಿಬ್ಯೂಟರ್ಸ್‌ ಮಾಲೀಕ ಉಮೇಶ ಹೆಗಡೆ, ಕೃಷಿ ಕೂಟದ ಅಧ್ಯಕ್ಷ ರವೀಂದ್ರ ಹಾಸ್ಯಗಾರ ಉಪಸ್ಥಿತರಿದ್ದರು.

ಎನ್‌.ನಾರಾಯಣ ಸ್ವಾಮಿ(ಅಡಿಕೆ ಬೆಳೆಯ ಸುಧಾರಿತ ಬೇಸಾಯ), ಡಾ.ವಿಜಯೇಂದ್ರ ಹೆಗಡೆ (ತೋಟ–ಪಟ್ಟಿ ಬೆಳೆಗಳಲ್ಲಿ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ) ಮಾತನಾಡಿದರು.

ಎಂ.ಎಸ್‌.ಹೆಗಡೆ ಸ್ವಾಗತಿಸಿದರು. ಪ್ರಭಾರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ  ಮಹಾಬಲೇಶ್ವರ ಬಿ.ಎಸ್‌. ಪ್ರಾಸ್ತಾವಿಕ ವಾಗಿ ಮಾತನಾಡಿದರು.  ಸುಬ್ರಾಯ ಹೆಗಡೆ ಸಾಯಿಮನೆ ವಂದಿಸಿದರು. ಹುಗ್ಗಿಗದ್ದೆಯ ಮಂಜುನಾಥ ಹೆಗಡೆ ಅವರ ತೋಟದಲ್ಲಿ ಅಡಿಕೆಗೆ ಔಷಧ ಸಿಂಪರಣೆಯ ಪ್ರಾತ್ಯಕ್ಷಿಕೆ ನಡೆಯಿತು.

ಗುರುವಂದನೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನೆ ಕಾರ್ಯಕ್ರಮ ತಾಲ್ಲೂಕಿನ ಕೊಂಡ್ಲಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ  ನಡೆಯಿತು.

ಮೀನಾ ತಂಡ ಮತ್ತು ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಡಿ.ಕೆ.ಶೆಡಗೇರಿ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ಆಕಾಶ ಕೊಂಡ್ಲಿ, ನೆಹರೂ ಯುವ ಕೇಂದ್ರದ ಸ್ವಯಂಸೇವಕಿ ಜ್ಯೋತಿ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.