ಹೊನ್ನಾವರ: ಆದಾಯ ತೆರಿಗೆ ಪಾವತಿಸಿದ ನಂತರದಲ್ಲಿ ಇಲ್ಲಿಯ ಹೊನ್ನಾವರ ಅರ್ಬನ್ ಬ್ಯಾಂಕ್ ₹ 1.21 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಘವ ಬಾಳೇರಿ ತಿಳಿಸಿದರು.
ವಾರ್ಷಿಕ ಸಭೆಯಲ್ಲಿ ಬ್ಯಾಂಕಿನ ಆರ್ಥಿಕ ಸ್ಥಿತಿ- ಗತಿಯ ಕುರಿತು ಅವರು ಮಾತನಾಡಿದರು. ಠೇವು ಸಂಗ್ರಹಣೆ ₹ 203 ಕೋಟಿಗೆ ತಲುಪಿದೆ. ₹ 121 ಕೋಟಿ ಸಾಲ ಮುಂಗಡ ನೀಡಲಾಗಿದೆ. ₹ 20 ಕೋಟಿ ಷೇರು ಭಂಡವಾಳ ಮತ್ತು ಸ್ವಂತ ನಿಧಿ ಇದೆ. ದುಡಿಯುವ ಬಂಡವಾಳ ₹ 223 ಕೋಟಿಗೆ ಏರಿಕೆಯಾಗಿದೆ. ₹91 ಕೋಟಿಯನ್ನು ಕೇಂದ್ರ ಸರ್ಕಾರದ ಸಾಲಪತ್ರ ಹಾಗೂ ವಿವಿಧ ಬ್ಯಾಂಕ್ಗಳಲ್ಲಿ ತೊಡಗಿಸಿರುವುದು ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ ಎಂದು ಅವರು ಹೇಳಿದರು.
24,493 ಷೇರು ಸದಸ್ಯರನ್ನು ಹೊಂದಿರುವ ಬ್ಯಾಂಕ್ ಒಂದೇ ವರ್ಷದಲ್ಲಿ ₹ 324 ಕೋಟಿ ವ್ಯವಹಾರ ನಡೆಸಿದೆ. ಪ್ರಸಕ್ತ ಸಾಲಿನ ಲೆಕ್ಕ ಪರಿಶೋಧನೆಯಲ್ಲೂ ಬ್ಯಾಂಕಿಗೆ ಅ ವರ್ಗ ಪ್ರಾಪ್ತವಾಗಿದ್ದು, ಷೇರು ಸದಸ್ಯರಿಗೆ ಪ್ರತಿಶತ 7 ಡಿವಿಡೆಂಡ್ ಘೋಷಿಸಲಾಗಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಆಕರ್ಷಕ ದರದಲ್ಲಿ ಸಾಲ ಸೇರಿದಂತೆ ವಿವಿಧ ಗ್ರಾಹಕ ಸ್ನೇಹಿ ಯೋಜನೆಗಳನ್ನು ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೊಬೈಲ್ ಬ್ಯಾಂಕಿಂಗ್ ಸೇವೆಗೆ ರಿಸರ್ವ್ ಬ್ಯಾಂಕ್ನಿಂದ ಅನುಮತಿ ಪಡೆಯಲಾಗಿದ್ದು, ಇದು ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.