ADVERTISEMENT

ಯುವಕರು ಕೃಷಿ ಅಭಿವೃದ್ಧಿಗೆ ಮುಂದಾಗಬೇಕು

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 7:11 IST
Last Updated 8 ಜನವರಿ 2018, 7:11 IST

ಅಂಕೋಲಾ: 'ಇಂದಿನ ದಿನಗಳಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ಈಗಲೇ ಅವರು ಎಚ್ಚೆತ್ತುಕೊಂಡು ಕೃಷಿಯ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕಿದೆ' ಎಂದು ಕೆನರಾ ವೆಲ್‌ಫೇರ್ ಟ್ರಸ್ಟ್ ಆಡಳಿತಾಧಿಕಾರಿ ಕೆ.ವಿ. ಶೆಟ್ಟಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಸೋಂದಾ ಶ್ರೀಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ 'ಕೃಷಿ ರಸಪ್ರಶ್ನೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಿ.ಎಂ. ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಕೇಣಿ ಮಾತನಾಡಿ, 'ದಿನಕರ ದೇಸಾಯಿಯವರು ರೈತರ ದೇಣಿಗೆ ಹಾಗೂ ಶ್ರಮದಿಂದ ಕಟ್ಟಿದ ರೈತಭವನದಲ್ಲಿಯೇ ಕೃಷಿ ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ’ಎಂದರು.

ADVERTISEMENT

‘ವಿಶೇಷವಾಗಿ ನಮ್ಮ ಜಿಲ್ಲೆಯ ಅಂಕೋಲಾ ಹಾಗೂ ಕಾರವಾರ ತಾಲ್ಲೂಕುಗಳಲ್ಲಿ ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿವೆ. ಜನರು ಕೃಷಿಯನ್ನು ಬಿಟ್ಟು ಇತರೆ ವೃತ್ತಿಗಳೆಡೆಗೆ ಒಲವು ತೋರುತ್ತಿದ್ದಾರೆ. ಸರ್ಕಾರವು ಕೃಷಿ ಪೂರಕ ಯೋಜನೆಗಳನ್ನು ಜಾರಿಗೊಳಿಸಬೇಕು. ಸರ್ಕಾರೇತರ ಸಂಘ- ಸಂಸ್ಥೆಗಳೂ ಈ ನಿಟ್ಟಿನಲ್ಲಿ ಸಹಕರಿಸಬೇಕು' ಎಂದು ಹೇಳಿದರು.

ಸನ್ಮಾನ: ಕೃಷಿ ಕ್ಷೇತ್ರದಲ್ಲಿನ ಅನನ್ಯ ಸಾಧನೆಗಾಗಿ ಪೂರ್ಣಾನಂದ ಭಟ್, ನಾರಾಯಣ ಹೆಗಡೆ, ದಿನಕರ ಭಟ್ಟ ಹಾಗೂ ಶುಭಾವತಿ ಭಾಸ್ಕರ ಅವರನ್ನು ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

ಅಂಕೋಲಾ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಜಯ ಮಹಾಲೆ ಹಾಗೂ ಕೃತಿನ್ ಬಂಟ ಅವರ ಗುಂಪು ಪ್ರಥಮ, ಭುವನ್ ನಾಯಕ ಹಾಗೂ ಪ್ರತೀಕ್ ಕಾಮತ್ ಅವರ ತಂಡ ದ್ವಿತೀಯ ಹಾಗೂ ದೀಕ್ಷಾ ನಾಯಕ ಹಾಗೂ ಆಶ್ರಿತಾ ಗುನಗಾ ಅವರ ತಂಡ ತೃತೀಯ ಬಹುಮಾನ ಪಡೆಯಿತು. ಪ್ರಥಮ, ದ್ವಿತೀಯ ಸ್ಥಾನ ಪಡೆದ ಗುಂಪು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.

ಜಯರಾಮ ಶಾನಭಾಗ ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕರಾದ ವಿ.ಟಿ. ಹೆಗಡೆ ಸ್ವಾಗತಿಸಿದರು. ರತ್ನಾಕರ ಹೆಗಡೆ ಬಾಡ್ಲಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಪತಿ ಹೆಗಡೆ ನಿರೂಪಿಸಿದರು. ಈಶ್ವರ ಭಟ್ಟ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.