ADVERTISEMENT

ಕದ್ರಾ, ಕೊಡಸಳ್ಳಿ ಕೆ.ಪಿ.ಸಿ ಗುತ್ತಿಗೆ ಕಾರ್ಮಿಕರ ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 4:39 IST
Last Updated 2 ಜನವರಿ 2022, 4:39 IST
ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಪಾವತಿಸುವಂತೆ ಕದ್ರಾ, ಕೊಡಸಳ್ಳಿಯ ಕೆ.ಪಿ.ಸಿ ಗುತ್ತಿಗೆ ಕಾರ್ಮಿಕರು ಶನಿವಾರ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ನೇತೃತ್ವದಲ್ಲಿ ಧರಣಿ ನಡೆಸಿದರು
ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಪಾವತಿಸುವಂತೆ ಕದ್ರಾ, ಕೊಡಸಳ್ಳಿಯ ಕೆ.ಪಿ.ಸಿ ಗುತ್ತಿಗೆ ಕಾರ್ಮಿಕರು ಶನಿವಾರ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ನೇತೃತ್ವದಲ್ಲಿ ಧರಣಿ ನಡೆಸಿದರು   

ಕಾರವಾರ: ‘ತಾಲ್ಲೂಕಿನ ಕದ್ರಾ ಮತ್ತು ಕೊಡಸಳ್ಳಿ ವಿದ್ಯುತ್ ಉತ್ಪಾದನಾ ಕೇಂದ್ರಗಳ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ ಬಗ್ಗೆ ಒಡಂಬಡಿಕೆ ಮಾಡಲಾಗಿದೆ. ಈ ಸಂಬಂಧ ಕರಾರು ಪತ್ರಕ್ಕೆ ಆಡಳಿತ ಮಂಡಳಿ ಮತ್ತು ಕಾರ್ಮಿಕ ಮುಖಂಡರು ಶನಿವಾರ ಸಹಿ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಸತೀಶ ಸೈಲ್ ತಿಳಿಸಿದ್ದಾರೆ.

‘ಎರಡೂ ಕಡೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರಿಗೆ ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಗಮನಕ್ಕೆ ಹಲವು ಬಾರಿ ತರಲಾಗಿತ್ತು. ಆದರೂ ಸ್ಪಂದಿಸದ ಕಾರಣ, ಶನಿವಾರ ಕದ್ರಾದಲ್ಲಿ ನೂರಾರು ಕಾರ್ಮಿಕರೊಂದಿಗೆ ಧರಣಿ ನಡೆಸಲಾಯಿತು’ ಎಂದು ಹೇಳಿದ್ದಾರೆ.

‘ಸ್ಥಳಕ್ಕೆ ಭೇಟಿ ನೀಡಿದ ಆಡಳಿತ ವರ್ಗದ ಅಧೀಕ್ಷಕ ಎಂಜಿನಿಯರ್ ಶ್ರೀಧರ ಕೋರಿ ಮತ್ತು ಇತರ ಉನ್ನತ ಅಧಿಕಾರಿಗಳು ಧರಣಿ ನಿರತರ ಬೇಡಿಕೆಯನ್ನು ಪರಿಗಣಿಸಿದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪ್ರತಿ ತಿಂಗಳ ಮೊದಲ ವಾರದಲ್ಲಿ ನೀಡುವುದು, ನುರಿತ, ಅರೆ ಕೌಶಲ, ಉನ್ನತ ನುರಿತ ಕಾರ್ಮಿಕರಿಗೆ ಸರ್ಕಾರ ನಿಗದಿ ಪಡಿಸಿದ ವೇತನವನ್ನು ನೀಡುವುದು, ಕಾಲಕಾಲಕ್ಕೆ ತುಟ್ಟಿ ಭತ್ಯೆಯನ್ನು ಕಡಿತ ಮಾಡದೇ ಪಾವತಿಸುವುದು, ನಿಗದಿತ ದರದಲ್ಲಿ ಪಿ.ಎಫ್, ಇ.ಎಸ್.ಐ ವಂತಿಗೆಯನ್ನು ಗುತ್ತಿಗೆದಾರರು ಪಾವತಿಸಲು ಒಡಂಬಡಿಕೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಪ್ರತಿ ತಿಂಗಳು ನೀಡಲಾಗುವ ವೇತನದ ಪ್ರತಿಯನ್ನು ಕೆ.ಪಿ.ಸಿ ಅಧಿಕಾರಿಗಳ ಸಹಿಯೊಂದಿಗೆ ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸುವುದು,ನಿಯಮ ಉಲ್ಲಂಘಿಸುವ ಗುತ್ತಿಗೆದಾರರ ಬಾಕಿ ಬಿಲ್ ತಡೆ ಹಿಡಿದು ಕಾರ್ಮಿಕರ ಬಾಕಿ ವೇತನ ಪಾವತಿಸುವ ಒಪ್ಪಂದಕ್ಕೆ ಬರಲಾಗಿದೆ’ ಎಂದು ತಿಳಿಸಿದ್ದಾರೆ.

‘ಸ್ಥಳೀಯವಾಗಿ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ನಿರ್ಣಯಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.