ಶಿರಸಿ: ಕೋವಿಡ್ 19 ಕಾರಣಕ್ಕೆ ಇಲ್ಲಿನ ಅಜಿತ ಮನೋಚೇತನಾ ವಿಕಾಸ ಶಾಲೆಯ ಶಿಕ್ಷಕರು ಮಕ್ಕಳ ಮನೆಗೇ ಹೋಗಿ ಪಾಠ ಪ್ರಾರಂಭಿಸಿದ್ದಾರೆ.
ನಗರ ಹಾಗೂ ಹೊರವಲಯದಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ಮನೆಗೆ ಹೋಗುವ ಶಾಲೆಯ ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ಹಾಗೂ ಸಹ ಶಿಕ್ಷಕಿಯರು, ಮಕ್ಕಳಿಗೆ ಯೋಗ, ಭಜನೆ, ಫಿಜಿಯೊಥೆರಪಿ ಕಲಿಸುತ್ತಿದ್ದಾರೆ. ಪಾಲಕರ ಬಳಿ ಮಕ್ಕಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ, ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆದು, ಉಚಿತವಾಗಿ ಔಷಧ ವಿತರಿಸಿ ಬರುತ್ತಾರೆ.
ಇದರ ಜೊತೆಗೆ ಶಿಕ್ಷಕಿಯರು ವಿಶೇಷ ಮಕ್ಕಳ ಸಮೀಕ್ಷೆಯನ್ನೂ ನಡೆಸುತ್ತಿದ್ದಾರೆ. ಶಾಲೆ ಬಂದಾಗಿದ್ದರೂ, ಬುದ್ಧಿಮಾಂದ್ಯ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ವಾರಕ್ಕೆ 2–3 ಬಾರಿ ಶಿಕ್ಷಕರು, ಮಕ್ಕಳ ಮನೆಗೇ ಹೋಗಿ ಶಾಲೆಯ ಪರಿಸರ ಸೃಷ್ಟಿಸಿ ಮಕ್ಕಳಲ್ಲಿ ಉತ್ಸಾಹ ತುಂಬುತ್ತಿರುವುದಕ್ಕೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷ ಮಕ್ಕಳ ಪಾಲಕರಲ್ಲಿ ಬಡವರು, ಶ್ರಮಿಕ ವರ್ಗಕ್ಕೆ ಸೇರಿದವರು ಹಲವರಿದ್ದಾರೆ.
ಅಜಿತ ಮನೋಚೇತನಾ ಟ್ರಸ್ಟ್ ಅಧ್ಯಕ್ಷ ಸುಧೀರ ಭಟ್ಟ ಹಾಗೂ ಕಾರ್ಯದರ್ಶಿ ಅನಂತ ಅಶೀಸರ ಅವರು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ಮಕ್ಕಳ ಮನೆಗೇ ಹೋಗಿ ತರಬೇತಿ ನಡೆಸಲು ಶಿಕ್ಷಕಿಯರಿಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.