ಕುಮಟಾ: ತಾಲ್ಲೂಕಿನ ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ನಾಲ್ಕು ದಿನಗಳ ಆಲೆಮನೆ ಹಬ್ಬಕ್ಕೆ ಶಾಸಕ ದಿನಕರ ಶೆಟ್ಟಿ ಶನಿವಾರ ಚಾಲನೆ ನೀಡಿದರು.
ನಂತರ ನಡೆದ ಗೋ ಸಂಧ್ಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ‘ಆರೋಗ್ಯ ವೃದ್ಧಿಗೆ ಏಕೈಕ ಮಾರ್ಗವಾಗಿರುವ ಗೋ ಪಾಲನೆ ಇಂದು ನಶಿಸಿದ್ದು, ಸಿದ್ಧ ಹಾಲಿನ ಬಳಕೆಯತ್ತ ಜನರು ಆಕರ್ಷಿತರಾಗುತ್ತಿರುವುದು ವಿಷಾದನೀಯ’ ಎಂದರು.
‘ದೇಸಿ ಹಾಲು, ತುಪ್ಪ, ಮೊಸರು ಎಲ್ಲವೂ ಮನುಷ್ಯನ ಆರೋಗ್ಯಕ್ಕೆ ನೈಸರ್ಗಿಕ ಆಹಾರವಾಗಿದೆ. ಅವುಗಳಿಲ್ಲದೆ ಆಹಾರ ಅಪೂರ್ಣ ಎನ್ನುವಂಥ ನಂಬಿಕೆಯಿಂದ ನಾವೆಲ್ಲ ದೂರವಾಗುತ್ತಿರುವುದು ನಮ್ಮ ಸಂಸ್ಕೃತಿಯ ನಾಶದ ಸಂಕೇತ. ಹೈನುಗಾರಿಕೆ, ಕೃಷಿಯ ನೆಮ್ಮದಿ, ಹಸುಗಳನ್ನು ಕಂಡಾಗ ಉಂಟಾಗುವ ಮಮತೆ ಎಲ್ಲವೂ ನಮ್ಮ ಭಾವನಾತ್ಮಕ ಬದುಕಿನ ಅಂಗವಾಗಿತ್ತು. ಇಂದು ಅವುಗಳನ್ನು ಬಿಟ್ಟು ಯಾಂತ್ರಿಕೃತ ಬದುಕನ್ನು ಅಪ್ಪಿಕೊಳ್ಳುತ್ತಿರುವುದು ವಿಚಿತ್ರ ಬೆಳವಣಿಗೆಯಾಗಿದೆ’ ಎಂದರು.
‘ಆ ಪರಂಪರೆಯನ್ನು ಜೀವಂತವಾಗಿಡಲು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿ ವರ್ಷ ಹೊಸಾಡ ಅಮೃತಧಾರಾ ಗೋ ಶಾಲೆಯಲ್ಲಿ ಆಲೆಮನೆ ಹಬ್ಬ ಆಚರಿಸುತ್ತಿರುವುದು ವಿಶೇಷ’ ಎಂದು ಹೇಳಿದರು.
ಡಿಎಫ್ಒ ಸಿ.ಕೆ.ಯೋಗೀಶ್ ಮಾತನಾಡಿ, ‘ಗೋ ಪಾಲನೆ ಪರಿಸರದೊಂದಿಗಿನ ಮನುಷ್ಯನ ಬದುಕಿನ ಆರಂಭದ ಮೊದಲ ಪಾಠವಾಗಿದೆ. ಕೃಷಿ, ಗೋ ಪಾಲನೆ ಕೀಳು ಎನ್ನುವ ಭಾವನೆಯಿಂದ ಹೊರ ಬಂದರೆ ಅದನ್ನು ಉದ್ಯಮದ ರೀತಿಯಲ್ಲಿ ಬೆಳೆಸಬಹುದು’ ಎಂದರು.
ಅಮೃತಧಾರಾ ಗೋ ಶಾಲೆಯ ಅಧ್ಯಕ್ಷ ಮುರಳಿಧರ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಇಸ್ರೊ ಮಾಜಿ ವಿಜ್ಞಾನಿ, ಪಿ.ಜೆ.ಭಟ್ಟ, ಇನ್ಫೊಸಿಸ್ನ ಹಿರಿಯ ಅಧಿಕಾರಿ ವಿನಾಯಕ ಹೆಗಡೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರದೀಪ ನಾಯಕ, ಜಿ.ಎಸ್.ಹೆಗಡೆ, ಎಸ್.ವಿ.ಹೆಗಡೆ, ಆರ್.ಜಿ.ಹೆಗಡೆ, ಅರುಣ ಹೆಗಡೆ, ಸುಬ್ರಾಯ ಭಟ್ಟ, ಮಂಜುನಾಥ ಭಟ್ಟ ಇದ್ದರು.
ಆಲೆಮನೆಯಲ್ಲಿ ತಯಾರಿಸಿದ ಕಬ್ಬಿನ ಹಾಲು, ಬಿಸಿ ಬೆಲ್ಲ ಹಾಗೂ ಬೆಲ್ಲದಲ್ಲಿ ಬೇಯಿಸಿದ ಎಳೆ ಕೊಬ್ಬರಿ, ಬಾಳೆದಿಂಡು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.