ದಾಂಡೇಲಿ: ತಾಲ್ಲೂಕಿನ ಬಡಾಕಾಶಿರಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರ್ನೋಡಾ ಗ್ರಾಮದ ದಟ್ಟಾರಣ್ಯದಲ್ಲಿ ಪ್ರಾಚೀನ ಕಾಲದ ಶಿವನ ದೇವಾಲಯವು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ನಿಧಿಗಾಗಿ ಕಳ್ಳರು ಶೋಧಿಸಿದ ಕುರುಹುಗಳು ಕಾಣಿಸುತ್ತಿವೆ.
ದೇವಸ್ಥಾನವು ಆಕರ್ಷಕಕಲ್ಲಿನ ಕೆತ್ತನೆಗಳನ್ನು ಹೊಂದಿದೆ. ಅರಣ್ಯವಾಸಿಗಳು ಈ ದೇವಸ್ಥಾನವನ್ನು ಗಮನಿಸಿದ್ದರಾದರೂ ಹೊರ ಜಗತ್ತಿಗೆ ಅಪರಿಚಿತವಾಗಿಯೇ ಉಳಿದಿದೆ.
ದೇವಸ್ಥಾನದ ಸುತ್ತಮತ್ತ ನಿಧಿ ಶೋಧನೆಗೆ ಮಣ್ಣನ್ನು ಅಗೆದು ಸುಂದರ ಪ್ರದೇಶವನ್ನು ಹಾಳುಗೆಡವಿದ್ದಾರೆ. ಶಿವನ ಲಿಂಗವನ್ನು ಪಕ್ಕಕ್ಕೆ ಸರಿಸಿ ಗರ್ಭಗುಡಿಯ ಮಧ್ಯಭಾಗದಲ್ಲಿ ಸುಮಾರು ಮೂರು ಅಡಿಗಳಿಗೂ ಹೆಚ್ಚು ಆಳಕ್ಕೆ ಅಗೆದು ನಿಧಿ ಶೋಧನೆ ಮಾಡಲಾಗಿದೆ. ಶಿವ ಲಿಂಗದ ಮೇಲೆ ಪ್ರಹಾರ ನಡೆಸಿ ಎರಡು ಭಾಗಗಳನ್ನಾಗಿ ಮಾಡಲಾಗಿದೆ.
ಬಿ.ಜೆ.ಪಿ ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಸುಧೀರ ಶೆಟ್ಟಿ, ಬಿ.ಜೆ.ಪಿ ಮುಖಂಡ ಸುಧಾಕರ ರೆಡ್ಡಿ ಮತ್ತು ಈ ಭಾಗದ ಗ್ರಾಮ ಪಂಚಾಯಿತಿ ಸದಸ್ಯ ಗೋಕುಲ ಮಿರಾಶಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ದೇವಸ್ಥಾನದ ಕುರಿತು ಅಧ್ಯಯನ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
‘ದಟ್ಟಾರಣ್ಯದಲ್ಲಿ ಪ್ರಾಚೀನ ದೇವಸ್ಥಾನ ಪೂರ್ವಾಪರಗಳನ್ನು ತಿಳಿದುಕೊಂಡು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತುರ್ತಾಗಿ ಮಾಡಬೇಕು. ಗ್ರಾಮಸ್ಥರಿಗೆ ದೇವಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಡುವ ಕೆಲಸ ಮಾಡಬೇಕಾಗಿದೆ’ ಎಂದು ಸುಧಾಕರ ರೆಡ್ಡಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.