
ಅಂಕೋಲಾ ಪಟ್ಟಣದ ಕೆಎಲ್ಇ ಸಂಸ್ಥೆಯಲ್ಲಿ ಶಿಕ್ಷಣ ತಜ್ಞ ಶೇಷಗಿರಿ ಪಿಕಳೆಯವರ ಕಂಚಿನ ಪುತ್ತಳಿಯನ್ನು ಡಾ.ಪ್ರಭಾಕರ ಕೋರೆ ಅನಾವರಣಗೊಳಿಸಿದರು.
ಅಂಕೋಲಾ: ಪಿಕಳೆ ದಂಪತಿಗಳು ಅವರ ಚಿಂತನೆಗಳಿಂದ 21ನೇ ಶತಮಾನದಲ್ಲಿ ಜನ ಮಾನಸದಲ್ಲಿ ಅಮರರಾಗಿದ್ದಾರೆ. ಆದಿವಾಸಿಗಳು, ಬಡವರು, ಹಿಂದುಳಿದವರು, ಮಹಿಳೆಯರಿಗಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದು ನಿಂತ ನೀರಾಗಬಾರದೆಂಬ ಉದ್ದೇಶದಿಂದ ಪ್ರಜಾಪ್ರಭುತ್ವ ಮಾದರಿಯಲ್ಲಿ ಸ್ಥಾಪಿತವಾದ ಕೆಎಲ್ಇ ಸಂಸ್ಥೆಯನ್ನು ಆಯ್ದುಕೊಂಡರು ಎಂದು ಕೆಎಲ್ಇ ಸಂಸ್ಥೆಯ ಮುಖ್ಯಸ್ಥರಾದ ಡಾ.ಪ್ರಭಾಕರ ಕೋರೆ ಹೇಳಿದರು.
ಪಟ್ಟಣದ ಕೆಎಲ್ಇ ಸಮೂಹ ಸಂಸ್ಥೆಯಲ್ಲಿ ರವಿವಾರ ಆಯೋಜಿಸಿದ್ದ ಶಿಕ್ಷಣ ತಜ್ಞ, ಹೋರಾಟಗಾರ ಶೇಷಗಿರಿ ಪಿಕಳೆಯವರ ಕಂಚಿನ ಪುತ್ತಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಸಪ್ತರ್ಷಿಗಳಿಂದ ಸ್ಥಾಪನೆಯಾದ ಕೆಎಲ್ಇ ಹಾಗೂ ಪಿಕಳೆಯವರ ಸೈದ್ಧಾಂತಿಕ ಚಿಂತನೆಯಲ್ಲಿ ಸಾಮ್ಯತೆ ಇರುವುದರಿಂದ ಪ್ರಸ್ತುತವಾಗಿ ಸಂಸ್ಥೆಯೂ ಸಹ ಆದಿಸೆಯಲ್ಲಿ ಮುಂದುವರೆಯುತ್ತಿದೆ.ಅಲ್ಲದೇ ಎಷ್ಟೇ ಸವಾಲಿನಿಂದ ಕೂಡಿದ್ದರು ಕೆಲವೇ ದಿನಗಳಲ್ಲಿ ಅಂಕೋಲಾದ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗುವುದು ಎಂದರು.
ಹಿರಿಯ ವಕೀಲ ಸುಭಾಷ್ ನಾರ್ವೇಕರ್ ಮಾತನಾಡಿ, ವಕೀಲರಾಗಿ, ಶಿಕ್ಷಣ ತಜ್ಞರಾಗಿದ್ದ ಶೇಷಗಿರಿ ಪಿಕಳೆಯವರು ಸೈದ್ಧಾಂತಿಕ ಛಲಹೊಂದಿದ ವ್ಯಕ್ತಿಯಾಗಿದ್ದರು ಎಂದರು. ನಿವೃತ್ತ ಶಿಕ್ಷಕ ನಾರಾಯಣ ನಾಯಕ, ಪತ್ರಕರ್ತ ವಿಠ್ಠಲದಾಸ ಕಾಮತ್, ಸಂಸ್ಥೆಯ ಕಾರ್ಯದರ್ಶಿ ಡಾ.ಡಿ.ಎಲ್.ಭಟ್ಕಳ ಮಾತನಾಡಿದರು.
ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಗಂಗಾಧರ ಇಸರನ್ನವರ, ಸಂಸ್ಥೆಯ ಸಂಯೋಜಕ ಆರ್.ನಟರಾಜ್, ಪ್ರಾಚಾರ್ಯ ಡಾ.ವಿನಾಯಕ ಹೆಗಡೆ, ಪ್ರೊ.ಸಂಜೀವ ನಾಯಕ, ಡಾ.ಮೀನಲ್ ನಾರ್ವೆಕರ, ಪ್ರಾಚಾರ್ಯೆ ಸರೋಜಿನಿ ಹಾರವಾಡೇಕರ್, ಉಪನ್ಯಾಸಕರಾದ ಮಂಜುನಾಥ ಇಟಗಿ, ಡಾ.ಪುಷ್ಪ ನಾಯ್ಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.