ADVERTISEMENT

‘ಸ್ವಾವಲಂಬಿ ಬದುಕಿಗೆ ಕೌಶಲ ರಹದಾರಿ’; ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 15:39 IST
Last Updated 4 ಅಕ್ಟೋಬರ್ 2021, 15:39 IST
ಬಿಣಗಾದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ‘ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು
ಬಿಣಗಾದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ‘ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು   

ಕಾರವಾರ: ‘ಕೌಶಲವು ಯಾರೊಬ್ಬನ ಸ್ವತ್ತು ಅಲ್ಲ. ಅದು ಸ್ವಾವಲಂಬಿ ಬದುಕಿಗೆ ರಹದಾರಿಯಾಗಿದೆ’ ಎಂದು ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹೇಳಿದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಸೋಮವಾರ ಬಿಣಗಾದ ಸೋಮನಾಥ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ, ಜಿಲ್ಲಾಮಟ್ಟದ ‘ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಮೇಳವು ಹಲವು ವಿದ್ಯಾರ್ಥಿಗಳ ಬದುಕಿನಲ್ಲಿ ದಾರಿದೀಪವಾಗಲಿದೆ. ಭಾಗವಹಿಸಿರುವ ವಿದ್ಯಾರ್ಥಿಗಳು ಶಿಸ್ತು ಹಾಗೂ ಸೇರಿಕೊಳ್ಳುವ ಕಂಪನಿಯೊಂದಿಗೆ ಪ್ರಾಮಾಣಿಕತೆಯಿಂದ ಇದ್ದರೆ ಭವಿಷ್ಯ ಉತ್ತಮವಾಗಿರುತ್ತದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

ಜಿಲ್ಲಾ ನೋಡಲ್ ಅಧಿಕಾರಿ ರವೀಂದ್ರನಾಥ್ ಸಿಗ್ಗಾಂವ್ಕರ್ ಮಾತನಾಡಿ, ‘ಈಗಾಗಲೇ ಉದ್ಯೋಗ ಇಲಾಖೆ ಅಧಿಕಾರಿಗಳಿಂದ 61 ಕಂಪನಿಗಳನ್ನು ಗುರುತಿಸಲಾಗಿದೆ. 15ಕ್ಕಿಂತ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ. ವಿವಿಧ ತಾಲ್ಲೂಕುಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಸೋಮನಾಥ್ ಕೈಗಾರಿಕಾ ತರಬೇತಿ ಸಂಸ್ಥೆಯ ಸಂಸ್ಥಾಪಕ ಪಿ.ಎಂ.ತಾಂಡೇಲ್, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಿ.ಟಿ.ನಾಯ್ಕ, ಸೋಮನಾಥ ಕೌಶಲಾಭಿವೃದ್ಧಿ ಸಂಸ್ಥೆಯ ಪ್ರಾಚಾರ್ಯ ಕಿಶೋರ್ ರಾಣೆ, ಬೆಂಗಳೂರಿನ ಇಂಡಿಯನ್ ಟೆಲಿಕಾಂ ಇಂಡಸ್ಟ್ರಿಯ ಅಧಿಕಾರಿ ಗಿರೀಶ್, ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಅಧಿಕಾರಿ ವಿಕ್ರಮ್ ಲೋಖಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.