ADVERTISEMENT

ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಭೀಮಣ್ಣ ನಾಯ್ಕಗೆ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:34 IST
Last Updated 22 ಫೆಬ್ರುವರಿ 2026, 2:34 IST
ಅಡಿಕೆ ಇಳುವರಿ ಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯದ ನೆರವಿಗೆ ಸರ್ಕಾರ ಧಾವಿಸುವಂತೆ ಆಗ್ರಹಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಅಡಿಕೆ ಇಳುವರಿ ಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯದ ನೆರವಿಗೆ ಸರ್ಕಾರ ಧಾವಿಸುವಂತೆ ಆಗ್ರಹಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.   

ಶಿರಸಿ: ಸಿದ್ದಾಪುರ ತಾಲ್ಲೂಕಿನಾದ್ಯಂತ ಅಡಿಕೆ ತೋಟಗಳಿಗೆ ತಗುಲಿರುವ ಭೀಕರ ರೋಗಬಾಧೆ ಹಾಗೂ ಇಳುವರಿ ಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯದ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

ಶನಿವಾರ ನಗರದ ಸುಪ್ರಿಯಾ ಹೋಟೆಲ್‌ನಲ್ಲಿ ಮನವಿ ನೀಡಿದ ಸಹಕಾರಪ್ರಮುಖರು, ‘ಸಿದ್ದಾಪುರ ತಾಲ್ಲೂಕಿನ ಶೇ. 80ಕ್ಕೂ ಹೆಚ್ಚು ಕುಟುಂಬಗಳು ಜೀವನೋಪಾಯಕ್ಕಾಗಿ ಅಡಿಕೆ ಬೆಳೆಯನ್ನೇ ನಂಬಿಕೊಂಡಿವೆ. ಆದರೆ ಎರಡು ವರ್ಷಗಳಿಂದ ಎಲೆಚುಕ್ಕಿ ರೋಗ ಸೇರಿದಂತೆ ವಿವಿಧ ಮಾರಕ ರೋಗಗಳ ಹಾವಳಿಯಿಂದ ಸಾವಿರಾರು ಎಕರೆ ತೋಟಗಳು ನಾಶವಾಗುವ ಭೀತಿ ಎದುರಿಸುತ್ತಿವೆ. ಕಳೆದ ವರ್ಷ ಇಳುವರಿಯಲ್ಲಿ ಶೇ.50ರಷ್ಟು ಕುಸಿತ ಕಂಡಿದ್ದರೆ, ಈ ಬಾರಿ ಅದು ಕೇವಲ ಶೇ. 30ಕ್ಕೆ ಸೀಮಿತವಾಗುವ ಆತಂಕವಿದ್ದು, ಅತಿಯಾದ ಮಳೆಯಿಂದ ಉಂಟಾದ ಕೊಳೆ ರೋಗ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಾರರು ಆರ್ಥಿಕವಾಗಿ ಹೈರಾಣಾಗಿದ್ದಾರೆ’ ಎಂದು ವಿವರಿಸಿದರು.

‘ಬೆಳೆಗಾರರು ಕೃಷಿ ಚಟುವಟಿಕೆಗಳಿಗಾಗಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದು, ಸದ್ಯ ಸಿದ್ದಾಪುರ ತಾಲ್ಲೂಕಿನ ರೈತರು ಸುಮಾರು ₹114 ಕೋಟಿ ಬೆಳೆ ಸಾಲ ಹಾಗೂ ₹98 ಕೋಟಿ  ಮಧ್ಯಮಾವಧಿ ಸಾಲದ ಹೊರೆಯಲ್ಲಿದ್ದಾರೆ. ಇಳುವರಿ ಇಲ್ಲದ ಕಾರಣ ಸಾಲ ಮರುಪಾವತಿ ಮಾಡುವುದು ಅಸಾಧ್ಯವಾಗಿದ್ದು, ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಕಳೆದ ಸಾಲಿನ ಬೆಳೆ ಸಾಲವನ್ನು ಬಡ್ಡಿ ರಿಯಾಯಿತಿಯೊಂದಿಗೆ ಮುಂದಿನ ಸಾಲಿಗೆ ನವೀಕರಿಸಬೇಕು ಹಾಗೂ ಸಹಕಾರಿ ಸಂಘಗಳಿಗೆ ಸರ್ಕಾರದಿಂದ ಬರಬೇಕಾದ ಬಡ್ಡಿ ಹಣವನ್ನು ಕೂಡಲೇ ಪಾವತಿಸಬೇಕು’ ಎಂದು ಸಹಕಾರ ಧುರೀಣರು ಒತ್ತಾಯಿಸಿದರು.

ADVERTISEMENT

‘ಮಧ್ಯಮಾವಧಿ ಸಾಲದ ಕಂತು ಪಾವತಿಗೆ ಕನಿಷ್ಠ ಒಂದು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ನೀಡಬೇಕು. 2024-25ನೇ ಸಾಲಿನ ಬೆಳೆ ವಿಮೆ ಪರಿಹಾರ ಮೊತ್ತವನ್ನು ರೈತರಿಗೆ ಶೀಘ್ರವಾಗಿ ವಿತರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಪ್ರಮುಖ ಸಹಕಾರಿಗಳಾದ ಎಂ.ಎಲ್.ಭಟ್ಟ, ಸಿ.ಎನ್.ಹೆಗಡೆ, ರಾಜು ಹೆಗಡೆ, ಎಂ.ಎನ್.ಹೆಗಡೆ, ಎಂ.ಜಿ.ನಾಯ್ಕ, ಅಶೋಕ ಹೆಗಡೆ, ವಿವೇಕ ಭಟ್ಟ ಗಡಿಹಿತ್ಲು, ಜಿ.ಎಂ.ಭಟ್, ಸುಬ್ರಾಯ ಸಾಯಿಮನೆ, ಪಿ.ಕೆ.ನಾಯ್ಕ, ಸಿ.ಎನ್.ಹೆಗಡೆ, ಕೆ.ಆರ್‌.ವಿನಾಯಕ, ಕೇಶವ ದೊಡ್ಮನೆ, ಸುಧೀರ ಗೌಡ ಹಾಗೂ ಟಿಎಂಎಸ್ ಸಿಇಓ ಸತೀಶ ಹೆಗಡೆ ಸೇರಿದಂತೆ ಅನೇಕ ಸಹಕಾರಿ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿವಿದ್ದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
- ಭೀಮಣ್ಣ ನಾಯ್ಕ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.