ADVERTISEMENT

ಶಿರಸಿ | ಬಿಸಿಲಿನ ಕಾವಿಲ್ಲದೆ ಮುಗ್ಗುತ್ತಿರುವ ಹಣ್ಣಡಿಕೆ

ಮಳೆ ಹಾಗೂ ಮೋಡಕವಿದ ವಾತಾವರಣದಿಂದ ಕಂಗೆಟ್ಟ ಬೆಳೆಗಾರ

ರಾಜೇಂದ್ರ ಹೆಗಡೆ
Published 29 ಸೆಪ್ಟೆಂಬರ್ 2025, 6:20 IST
Last Updated 29 ಸೆಪ್ಟೆಂಬರ್ 2025, 6:20 IST
ನಿರಂತರ ಮಳೆ ಹಾಗೂ ಮೋಡದ ವಾತಾವರಣದಿಂದ ಒಣಗಿ ಹಾಕಿರುವ ಹಣ್ಣಡಿಕೆ ಕೊಳೆಯುತ್ತಿರುವುದು
ನಿರಂತರ ಮಳೆ ಹಾಗೂ ಮೋಡದ ವಾತಾವರಣದಿಂದ ಒಣಗಿ ಹಾಕಿರುವ ಹಣ್ಣಡಿಕೆ ಕೊಳೆಯುತ್ತಿರುವುದು   

ಶಿರಸಿ: ಪ್ರಸ್ತಕ ಸಾಲಿನ ನಿರಂತರ ಮಳೆಯು ಅಡಿಕೆ ಬೆಳೆಗಾರರಿಗೆ ತುಂಬಲಾರದ ನಷ್ಟಕ್ಕೆ ಕಾರಣವಾಗುತ್ತಿದೆ. ಒಂದೆಡೆ ನಿಲ್ಲದ ಕೊಳೆ, ಇನ್ನೊಂದೆಡೆ ವಿಸ್ತರಿಸುತ್ತಿರುವ ಎಲೆಚುಕ್ಕಿಯ ಜತೆ ಪ್ರಸ್ತುತ ಸುರಿಯುತ್ತಿರುವ ಮಳೆ ಹಾಗೂ ಮೋಡದ ವಾತಾವರಣ ಹಣ್ಣಡಿಕೆ ಒಣಗಿಸಲು ಸಮಸ್ಯೆ ಸೃಷ್ಟಿಸಿದೆ. ಬಿಸಿಲಿನ ಕಾವು ಇಲ್ಲದೆ ಮುಗ್ಗತೊಡಗಿರುವ ಅಡಿಕೆಯು ಕಪ್ಪಾಗುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಅತಿವೃಷ್ಟಿಯ ಕಾರಣಕ್ಕೆ ಅಡಿಕೆ ಬೆಳೆ ಕೊಳೆಯಿಂದ ಭಾಗಶಃ ನಾಶವಾಗಿದೆ. ಪ್ರಸ್ತುತ ವಾಯುಭಾರ ಕುಸಿತದ ಕಾರಣದಿಂದ ಪ್ರತಿ ದಿನ ಸುರಿಯುವ ಮಳೆ, ಮೋಡದ ವಾತಾವರಣವು ಅಳಿದುಳಿದ ಅಡಿಕೆ ಬೆಳೆಯ ಮೇಲೆ ಪರಿಣಾಮ ಬೀರತೊಡಗಿದೆ. ಬಿದ್ದ ಅಡಿಕೆ ಹೆಕ್ಕಿ ಒಣಗಿಸಲು ಮಲೆ ಹಾಗೂ ಮೋಡದ ವಾತಾವರಣ ತಡೆಯಾಗುತ್ತಿರುವುದು ರೈತರ ಆತಂಕ ಹೆಚ್ಚಲು ಕಾರಣವಾಗಿದೆ.  

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕುಗಳಲ್ಲಿ ಅಕ್ಟೋಬರ್ ಮೂರನೇ ವಾರದಿಂದ ಇಲ್ಲವೇ ನವೆಂಬರ್‌ ಆರಂಭದಿಂದ ಹಸಿ ಅಡಿಕೆ ಕೊಯ್ಲ ಆರಂಭವಾಗುತ್ತದೆ. ಅದಕ್ಕೂ ಪೂರ್ವ ಹಣ್ಣಾದ ಅಡಿಕೆ ಕೊಯ್ಲು ಮಾಡಲಾಗುತ್ತದೆ. ಪ್ರಸ್ತುತ ಹಲವು ತೋಟಗಳಲ್ಲಿ ಅಡಿಕೆ ಶೇಕಡಾ 25–30ರಷ್ಟು ಹಣ್ಣಾಗಿದೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಹಲವು ರೈತರು ಮೊದಲ ಹಂತದ ಗೋಟಡಿಕೆ ಕೊಯ್ಲು ಆರಂಭಿಸುತ್ತಿದ್ದರು. ಆದರೆ ಈ ಬಾರಿ ಮಾತ್ರ ನಿರಂತರ ಮಳೆಯ ಕಾರಣಕ್ಕೆ ಅಡಿಕೆ ಈಗಾಗಲೇ ಹಣ್ಣಾಗಿ ನೆಲಕ್ಕೆ ಬೀಳುತ್ತಿದ್ದು, ಕೊಯ್ಲು ಮಾಡಲು ಆಗದೇ, ಹಾಗೆಯೇ ಬಿಡಲೂ ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. 

ADVERTISEMENT

‘ಅಡಿಕೆ ಹಣ್ಣಾಗಿ ತೋಟದಲ್ಲಿ ಉದುರುತ್ತಿವೆ. ಹಣ್ಣಾದ ಅಡಿಕೆ ಮರದಲ್ಲಿಯೇ ಬಿಡುವಂತೆಯೂ ಇಲ್ಲ. ಬಿದ್ದ ಅಡಿಕೆ ಹೆಕ್ಕಿ ತಂದರೂ ಮಳೆಯ ಕಾರಣಕ್ಕೆ ಒಣಗಿಸಲು ಸಮಸ್ಯೆ. ಒಂದೊಮ್ಮೆ ಒಣಹಾಕಿದರೂ ಗುಣಮಟ್ಟದ ಚಾಲಿಯ ಬದಲು ಕಪ್ಪು ಬಣ್ಣದ ಚಾಲಿಯಾಗುತ್ತವೆ’ ಎಂಬುದು ಬಹುತೇಕ ಬೆಳೆಗಾರರ ಚಿಂತೆಯಾಗಿದೆ.  

‘ತೋಟದಲ್ಲಿ ಉದುರಿದ ಹಣ್ಣಡಿಕೆ ಆರಿಸಿ ಮನೆಗೆ ತಂದರೆ ಒಣಗಿಸಲು ವ್ಯವಸ್ಥೆ ಇಲ್ಲ. ಹಣ್ಣಡಿಕೆ ಒಣಗುವುದಕ್ಕೆ ಕನಿಷ್ಠ 20 ದಿನ ಉತ್ತಮ ಬಿಸಿಲು ಇರಬೇಕು. ಆದರೆ ಪ್ರಸ್ತುತ ಒಂದು ದಿನ ಕೂಡ ಸಾಕಷ್ಟು ಬಿಸಿಲು ಬರುತ್ತಿಲ್ಲ ಎಂಬ ಪರಿಸ್ಥಿತಿ ಇದೆ. ಬೆರಳೆಣಿಕೆಯ ಕೆಲವೇ ಬೆಳೆಗಾರರು ಮಾತ್ರ ಅಡಿಕೆ ಒಣಗಿಸುವುದಕ್ಕೆ ಡ್ರೈಯರ್‌ ಅಥವಾ ಪಾಲಿಹೌಸ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಬಹುಪಾಲು ಬೆಳೆಗಾರರು ಇನ್ನೂ ಬಿಸಿಲನ್ನೇ ಅವಲಂಬಿಸಿದ್ದಾರೆ. ಇಂಥವರೆಲ್ಲ ಈಗ ಅಡಿಕೆ ಒಣಗಿಸುವುದಕ್ಕೆ ಪರದಾಡುತ್ತಿದ್ದಾರೆ. ಮತ್ತೆ ಮತ್ತೆ ಸುರಿಯುತ್ತಿರುವ ಮಳೆ ಬೆಳೆಗಾರರು ಕಂಗಾಲಾಗುವಂತೆ ಮಾಡುತ್ತಿದೆ’ ಎನ್ನುತ್ತಾರೆ ಬೆಳೆಗಾರರು.

‌ಶೇ.30ರಷ್ಟು ಹಣ್ಣಾದ ಅಡಿಕೆ  ಒಣಗಿಸಲು ಎದುರಾದ ಸಮಸ್ಯೆ  ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ 

ನವರಾತ್ರಿ ಹಬ್ಬದ ವೇಳೆಗೆ ಸ್ವಲ್ಪ ಬಿಸಿಲ ವಾತಾವರಣ ಇರುತ್ತಿತ್ತು. ಆದರೆ ಈ ವರ್ಷ ಮಳೆ ಬಿಡುವಿಲ್ಲದ ಕಾರಣ ಗೋಟಡಿಕೆ ಒಣಗಿಸಲು ಸಮಸ್ಯೆಯಾಗಿದೆ.
ನರಸಿಂಹ ಹೆಗಡೆ ಅಡಿಕೆ ಬೆಳೆಗಾರ
ನಿಲ್ಲದ ಕೊಳೆ:
ಬೆಂಬಿಡದ ಎಲೆಚುಕ್ಕಿ ‘ಅತಿವೃಷ್ಠಿಯ ಕಾರಣಕ್ಕೆ ಈಗಾಗಲೇ ಅಡಿಕೆಗೆ ಕೊಳೆ ರೋಗ ಬಾಧಿಸಿದೆ. ಪ್ರತಿ ಬೆಳೆಗಾರ ಕನಿಷ್ಠ 3 ಬಾರಿ ಬೋರ್ಡೋ ದ್ರಾವಣ ಸಿಂಪಡಿಸಿದ್ದಾನೆ. ಆದರೂ ಬಹುತೇಕ ತೋಟಗಳಲ್ಲಿ ರೋಗ ಹತೋಟಿಗೆ ಬಂದಿಲ್ಲ. ಜತೆ ಎಲೆಚುಕ್ಕಿ ರೋಗವೂ ವ್ಯಾಪಕವಾಗುತ್ತಿದ್ದು ಸಿಪಿಸಿಆರ್ ಐ ವಿಜ್ಞಾನಿಗಳ ತಂಡ ರೋಗ ನಿಯಂತ್ರಣ ಸಂಬಂಧ ಪ್ರಯೋಗಕ್ಕೆ ಒಳಪಡಿಸಿರುವ ತೋಟಗಳಲ್ಲೂ ಎಲೆಚುಕ್ಕಿ ನಿಯಂತ್ರಣಕ್ಕೆ ಬಂದಿಲ್ಲ. ಇದು ಅಡಿಕೆ ಬೆಳೆಗಾರರ ಉತ್ಸಾಹ ಕುಗ್ಗುವಂತೆ ಮಾಡಿದೆ’ ಎಂಬುದು ಬಹುತೇಕ ಅಡಿಕೆ ಬೆಳೆಗಾರರ ಮಾತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.