ಶಿರಸಿ: ಸಂಘಟಿತರಾಗಿ ಸವಾಲು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ವೀರ ಸೈನಿಕರು ನಮಗೆ ಪ್ರೇರಣೆಯಾಗಬೇಕು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ವಿಶಾಲನಗರದ ಉದ್ಯಾನವನದಲ್ಲಿ ಬುಧವಾರ ₹8 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಹುತಾತ್ಮ ಸೈನಿಕರ ಸ್ಮಾರಕ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದೊಳಗೆ ಜನ ನೆಮ್ಮದಿಯಿಂದ ಜೀವನ ಸಾಗಿಸಲು ಗಡಿ ಕಾಯುವ ಸೈನಿಕರ ಶ್ರಮವೇ ಕಾರಣ. ಪ್ರಾಣ ಪಣಕ್ಕಿಟ್ಟು ದೇಶಸೇವೆ ಮಾಡುವ ಅವರ ಕರ್ತವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದರು.
‘ಹಣ ಗಳಿಕೆಯ ಬುದ್ಧಿಯನ್ನಷ್ಟೇ ಬೆಳೆಸುವ ಶಿಕ್ಷಣ ದೇಶಭಕ್ತಿಯನ್ನು ಕಲಿಸುತ್ತಿಲ್ಲ. ಸ್ವಪ್ರಜ್ಞೆಯಿಂದ ಪ್ರತಿಯೊಬ್ಬರೂ ರಾಷ್ಟ್ರೀಯತೆಯ ದೃಷ್ಟಿಕೋನ ಬೆಳೆಸಿಕೊಳ್ಳಬೇಕಿದೆ’ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ‘ದೇಶಕ್ಕಾಗಿ ಹೋರಾಡಿ ಮಡಿದವರಿಗೆ ಗೌರವಿಸುವ ಸ್ಮಾರಕ ನಿರ್ಮಿಸಿದ ಸಮಾಧಾನವಿದೆ’ ಎಂದರು.
ನಿವೃತ್ತ ಸೈನಿಕರಾದ ನಾಗೇಶ ಮಂಜುನಾಥ, ಎಚ್.ನಾಗಪ್ಪ, ವಿಶ್ವನಾಥ ಹೆಗಡೆ, ನಾರಾಯಣ ಜನ್ನು, ಆರ್.ವಿ.ಲೋಖರೆ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಸದಸ್ಯ ಕಿರಣ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ ಜನ್ನು, ಡಿಎಸ್ಪಿ ರವಿ ನಾಯ್ಕ, ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಸಿಡಿಪಿಒ ದತ್ತಾತ್ರೇಯ ಭಟ್ಟ, ನಿವೃತ್ತ ಸೈನಿಕರ ಸಂಘದ ವಿನಾಯಕ ಭಟ್ಟ ಧೀರನ್, ಮುರಾರಿ ಭಟ್, ಇತರರು ಇದ್ದರು.
ಪೌರಾಯುಕ್ತ ಕೇಶವ ಚೌಗುಲೆ ಸ್ವಾಗತಿಸಿದರು. ಡಾ.ಸುಮನ್ ಹೆಗಡೆ ದೇಶಭಕ್ತಿ ಗೀತೆ ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.