
ಶಿರಸಿ: ‘ಸಜ್ಜನರು ನಿಷ್ಕ್ರಿಯವಾಗಿರುವುದರಿಂದ ದುರ್ಜನರು ವಿಜೃಂಭಿಸುತ್ತಿದ್ದಾರೆ. ಜವಾಬ್ದಾರಿಯುತವಾಗಿ ವಿಚಾರ ಮಾಡುವವರ ಸಂಖ್ಯೆ ಹೆಚ್ಚಬೇಕು. ಆಗ ದೇಶ ಬಲಿಷ್ಠವಾಗುತ್ತದೆ’ ಎಂದು ನಿವೃತ್ತ ವಿಂಗ್ ಕಮಾಂಡರ್ ಮುರಾರಿ ಭಟ್ ಹೇಳಿದರು.
ನಗರದ ರಂಗಧಾಮದಲ್ಲಿ ಬೆಂಗಳೂರಿನ ಆಲ್ ಯೂನಿಫಾರ್ಮ್ ಟ್ರೈನಿಂಗ್ ಅಕಾಡೆಮಿ ಮತ್ತು ಭಾರತ್ ಭಾರತಿ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ನಿವೃತ್ತ ಸೈನಿಕ ತಂಡದಿಂದ ಸೋಮವಾರ ಏರ್ಪಡಿಸಿದ್ದ ಅಗ್ನಿವೀರ್ ಆಕಾಂಕ್ಷಿಗಳಿಗೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
‘ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಬರಬಾರದು. ದೇಶದ ಭದ್ರತೆ ಹಾಗೂ ಚಿಂತನೆ ಇಟ್ಟುಕೊಂಡು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಬಲರಾಗಬೇಕಾದರೆ ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಉತ್ತರ ಭಾರತದ ಪ್ರತಿ ಕುಟುಂಬದಲ್ಲಿ ಸೈನಿಕರನ್ನು ಕಾಣುತ್ತೇವೆ. ಜವಾಬ್ದಾರಿ ಅರಿತು ಕೆಲಸ ಮಾಡಿರೆ ವಿಫುಲ ಅವಕಾಶವಿದೆ. ದಕ್ಷಿಣ ಭಾರತದವರು ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಬೇಕು ಎಂಬ ಉದ್ದೇಶದಿಂದ ನಿವೃತ್ತ ಸೈನಿಕರ ತಂಡವು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ’ ಎಂದರು.
ನಿವೃತ್ತ ಮೇಜರ್ ಸಂಜಯ ಮೆಹರೋತ್ರ ತರಬೇತಿ ಶಿಬಿರದ ಪ್ರಾರಂಭೋತ್ಸವ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ ವೈಶಾಲಿ ಅಧ್ಯಕ್ಷತೆ ವಹಿಸಿದ್ದರು. ಭಾರತ ಭಾರತಿ ಟ್ರಸ್ಟ್ ಬೆಂಗಳೂರು ಘಟಕದ ಅಧ್ಯಕ್ಷ ಮೇಜರ್ ಗಣಪತಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.
ಟಿಎಸ್ಎಸ್ ಆಸ್ಪತ್ರೆಯ ವೈದ್ಯ ಮೇಜರ್ ಜೆ.ಬಿ.ಕಾರಂತ, ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಟಿ.ಭಟ್, ನಿವೃತ್ತ ಪ್ರಾಚಾರ್ಯೆ ಕೋಮಲಾ ಭಟ್, ಲೆಕ್ಕ ಪರಿಶೋಧಕ ಉದಯ ಸ್ವಾದಿ, ಟಿಎಸ್ಎಸ್ ಉಪಾಧ್ಯಕ್ಷ ಎಂ.ಎನ್.ಭಟ್, ಉದ್ಯಮಿ ಸತೀಶ ಹೆಗಡೆ ಚಿಪಗಿ, ನೇತಾಜಿ ಸುಭಾಶ್ಚಂದ್ರ ಬೋಸ್ ಕಾರ್ಯಪಡೆ ಅಧ್ಯಕ್ಷ ಕೇಶವ ದೊಂಬೆ, ಎಂಇಎಸ್ ಕಾಲೇಜಿನ ಉಪನ್ಯಾಸಕ ವಿ.ಜಿ.ಹೆಗಡೆ, ನಿವೃತ್ತ ಮುಖ್ಯಶಿಕ್ಷಕ ಕೆ.ಆರ್.ಹೆಗಡೆ ಕಾನಸೂರು, ನಿವೃತ್ತ ಸೈನಿಕರಾದ ಎಸ್.ಎಸ್.ಭಟ್, ಜಿ.ವಿ.ಹೆಗಡೆ, ವಿನಾಯಕ ಧೀರನ್ ಇದ್ದರು. ನಿವೃತ್ತ ಸೈನಿಕ ಜಿ.ಎಸ್.ಹೆಗಡೆ ಪ್ರಾರ್ಥಿಸಿದರು, ಶ್ರೀಪಾದ ಹೆಗಡೆ ಸ್ವಾಗತಿಸಿದರು, ಪ್ರಿಯಾಂಕಾ ಹೆಗಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.