ಮುಂಡಗೋಡ: ಐದು ಅರಣ್ಯ ವಲಯಗಳಲ್ಲಿ, ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊಂದಿರುವ ಶಿರಸಿ ರಾಜೀವನಗರ ನಿವಾಸಿ ಅಬ್ದುಲ್ ಖುದ್ದಾಸ್ ಅಹಮ್ಮದಮಿಯಾ ಖತೀಬ (58)ನನ್ನು ಅರಣ್ಯ ಅಧಿಕಾರಿಗಳ ತಂಡವು ಮಂಗಳವಾರ ಬಂಧಿಸಿ, ಯಲ್ಲಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಮಂಚಿಕೇರಿ ಅರಣ್ಯ ವಲಯದಲ್ಲಿ ನಾಲ್ಕು ಪ್ರಕರಣಗಳು, ಕಾತೂರ ವಲಯದಲ್ಲಿ ಎರಡು, ಬನವಾಸಿ ವಲಯ, ರಾಮನಗುಳಿ ವಲಯಗಳಲ್ಲಿ ತಲಾ ಒಂದು ಹಾಗೂ ಮಾಸ್ತಿಕಟ್ಟಾ ವಲಯದಲ್ಲಿ ಮೂರು ಪ್ರಕರಣಗಳಲ್ಲಿ ಬಂಧಿತ ಆರೋಪಿಯು ಭಾಗಿಯಾಗಿರುವುದನ್ನು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅನೇಕ ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದ ಎಂದು ಕಾತೂರ ವಲಯದ ಆರ್ಎಫ್ಓ ಕೆ.ಮಹೇಶ ಗೌಡ ತಿಳಿಸಿದ್ದಾರೆ.
ಹೆಚ್ಚಿನ ತನಿಖೆಗೆ ವಿಶೇಷ ತಂಡವನ್ನು ರಚಿಸಿ, ಪ್ರಕರಣಗಳಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ, ಪರಾರಿಯಾಗುತ್ತಿದ್ದ ಆರೋಪಿಯನ್ನು ಬಂಧಿಸಿರುವ ತಂಡವನ್ನು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಗೋಡ, ಯಲ್ಲಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶ್ಕುಮಾರ ಅಭಿನಂದಿಸಿದ್ದಾರೆ.
ಮಂಚಿಕೇರಿ ಉಪವಿಭಾಗ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪಿ.ಕೆ.ಎಂ.ಪ್ರಶಾಂತ, ಕಾತೂರ ವಲಯ ಅರಣ್ಯಾಧಿಕಾರಿ ಮಹೇಶ ಗೌಡ, ಅರಣ್ಯಾಧಿಕಾರಿಗಳಾದ ಕಲ್ಲಪ್ಪ ಬರದುರ, ಬಿ.ವೀರೇಶ, ವೈ.ಎಲ್.ಹಮಾನಿ, ಸಿಬ್ಬಂದಿ ಮಾರುತಿ ಸೊರಗಾವಿ, ತಮ್ಮಣ್ಣ ಭಜಂತ್ರಿ, ಶಿವಪ್ರಕಾಶ ಜೋಗಿಹಳ್ಳಿ, ಹರೀಶ ನಾಯ್ಕ, ಸತ್ಯಪ್ಪ ಉಪ್ಪಾರ, ರಾಯಪ್ಪ ಪಡೆನ್ನವರ, ಸಾವಿತ್ರಿ ತಿಗಡಿ, ನಾಗರಾಜ ಕಾಜಗಾರ, ಬಸವರಾಜ ಗೆದ್ದಿಕೇರಿ, ಇರ್ಫಾನ ಮುಜಾವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.