ADVERTISEMENT

ಶಿರಸಿ–ಹಾವೇರಿ ರಸ್ತೆ ವಿಸ್ತರಣೆ ಸನ್ನಿಹಿತ

ವರ್ಷದ ಬಳಿಕ ಅರಣ್ಯ ಇಲಾಖೆಯಿಂದ ದೊರೆತ ನಿರಾಕ್ಷೇಪಣೆ ಪತ್ರ: ಅಡ್ಡಿ ನಿವಾರಣೆ

ರಾಜೇಂದ್ರ ಹೆಗಡೆ
Published 22 ಮೇ 2025, 7:36 IST
Last Updated 22 ಮೇ 2025, 7:36 IST
ಸಾಗರಮಾಲಾ ಯೋಜನೆಯಡಿ ವಿಸ್ತರಣೆಯಾಗಬೇಕಿರುವ ಶಿರಸಿ–ಹಾವೇರಿ ರಸ್ತೆ 
ಸಾಗರಮಾಲಾ ಯೋಜನೆಯಡಿ ವಿಸ್ತರಣೆಯಾಗಬೇಕಿರುವ ಶಿರಸಿ–ಹಾವೇರಿ ರಸ್ತೆ    

ಶಿರಸಿ: ಸಾಗರಮಾಲಾ ಯೋಜನೆಯಡಿ ಶಿರಸಿ–ಹಾವೇರಿ ಹೆದ್ದಾರಿ (766ಇ) ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆಯಿಂದ ಮೊದಲ ಹಂತದ ಅನುಮತಿ ಸಿಕ್ಕಿದ್ದು, ವರ್ಷಗಳಿಂದ ತೊಡಕಾಗಿದ್ದ ವಿಘ್ನ ನಿವಾರಣೆಯಾಗಿದೆ.

ತಾಲ್ಲೂಕಿನ ಬಿಸಲಕೊಪ್ಪದಿಂದ ಹಾವೇರಿ ಜಿಲ್ಲೆಯ ನಾಲ್ಕರ ಕ್ರಾಸ್‌ವರೆಗಿನ ಹೆದ್ದಾರಿ (766ಇ) ಕಾಮಗಾರಿಗೆ 2022ರಲ್ಲಿ ಚಾಲನೆ ದೊರೆತಿತ್ತು. ಒಟ್ಟು 74 ಕಿ.ಮೀ.ವರೆಗೆ ರಸ್ತೆ ವಿಸ್ತರಣೆ ಹಾಗೂ ಸುಧಾರಣೆಯಾಗಬೇಕಿದೆ. ಅದರಲ್ಲಿ, ಶಿರಸಿ ತಾಲ್ಲೂಕು ವ್ಯಾಪ್ತಿಯಲ್ಲಿ 22 ಕಿ.ಮೀ.ವರೆಗೆ ರಸ್ತೆ ಕಾಮಗಾರಿ ನಡೆಯಬೇಕಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಅಮ್ಮಾಪುರ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿದೆ. ಗುತ್ತಿಗೆದಾರ ಕಂಪನಿಯೇ ಹೇಳುವಂತೆ ಕೇವಲ 5 ಕಿ.ಮೀ. ಮಾತ್ರ ಕಾಮಗಾರಿ ನಡೆದಿದೆ. ಮಳಲಗಾಂವ, ದನಗನಹಳ್ಳಿ, ದಾಸನಕೊಪ್ಪ ಹೀಗೆ ಹೆದ್ದಾರಿಗಾಗಿ ಅಲ್ಲಲ್ಲಿ ಕಲ್ವರ್ಟ್‌ ಚರಂಡಿ (ಸಿ.ಡಿ) ಕಾಮಗಾರಿ ನಡೆದಿದೆ. ಅದು ಸಹ ಸರಿಯಾದ ನಿರ್ವಹಣೆ ಇಲ್ಲದೇ ಅಸ್ತವ್ಯಸ್ತವಾಗಿದೆ ಎಂಬುದು ಜನರ ಆರೋಪ.

ADVERTISEMENT

ಈ ರಸ್ತೆಯು ಶತಮಾನಗಳ ಹಿಂದೆ ದಾಸನಕೊಪ್ಪ ಗ್ರಾಮದ ರಸ್ತೆಯಾಗಿ ಬಳಕೆಯಾಗಿದೆ. ಆ ಬಳಿಕ ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ರಾಜ್ಯ ಹೆದ್ದಾರಿಯಾಗಿ ಬದಲಿಸುವಾಗ ಯಾವುದೇ ರೀತಿಯ ಅಧಿಸೂಚನೆ ಹೊರಡಿಸಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿಗೆ ಗುತ್ತಿಗೆ ಕೊಟ್ಟ ನಂತರ ರಸ್ತೆ ವಿಸ್ತರಣೆಗಾಗಿ ಗಿಡ ಕತ್ತರಿಸಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆಗ ಇಡೀ ರಸ್ತೆ ಅರಣ್ಯ ಇಲಾಖೆ ಜಾಗದಲ್ಲಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಹೀಗಾಗಿ, ಅರಣ್ಯ ಇಲಾಖೆಯು ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚಿಸಿತ್ತು. 

‘ವರ್ಷದ ಹಿಂದೆ ಗುತ್ತಿಗೆದಾರ ಕಂಪನಿಯು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಕೇಂದ್ರ ಪರಿಸರ ಮಂತ್ರಾಲಯಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ದಾಖಲೆಗಳನ್ನು ಸರಿಯಾಗಿ ಒದಗಿಸದ ಕಾರಣ, ಒಪ್ಪಿಗೆ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆಯೇ ಸೂಕ್ತ ದಾಖಲೆಗಳನ್ನು ಒದಗಿಸಿದ್ದು, ವರ್ಷಗಳಿಂದ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿತ್ತು. ನಂತರ, ಅರಣ್ಯ ಇಲಾಖೆಗೆ ಅನುಮತಿಗಾಗಿ ಸೂಚಿಸಲಾಗಿತ್ತು. ಇದೀಗ ಕಾಮಗಾರಿ ಚಾಲನೆಗೆ ಅನುಮತಿ ದೊರೆತಿದೆ’ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸಮಯ ವ್ಯರ್ಥ ಮಾಡಬೇಡಿ’

‘ರಸ್ತೆ ವಿಸ್ತರಣೆ ವೇಳೆ ಮರಗಳ ಕಟಾವಿಗೆ ಇನ್ನಷ್ಟೇ ಅನುಮತಿ ಸಿಗಬೇಕಿದೆ.   ಮಳೆಗಾಲ ಆರಂಭವಾಗಲಿದ್ದು ಡಿಸೆಂಬರ್ ಇಲ್ಲವೇ ಮುಂದಿನ ವರ್ಷದ ಜನವರಿವರೆಗೆ ಕಾಮಗಾರಿಗಾಗಿ ಕಾಯುವುದು ಅನಿವಾರ್ಯವಾಗಲಿದೆ. ಇದರಿಂದಾಗಿ ಈ ವರ್ಷದ ಮಳೆಗಾಲದಲ್ಲೂ ಪ್ರಯಾಣಿಕರು ಅಪಾಯದ ನಡುವೆಯೇ ಸಂಚರಿಸುವ ಅನಿವಾರ್ಯತೆ ಎದುರಿಸಬೇಕಿದೆ. ಹಾಗಾಗಿ ಸಮಯ ವ್ಯರ್ಥ ಮಾಡದೆ ಕಾಮಗಾರಿ ಶುರು ಮಾಡಬೇಕು’ ಎಂಬುದು ಹಲವು ಪ್ರಯಾಣಿಕರ ಅಭಿಪ್ರಾಯ.

ಮೊದಲ ಹಂತದ ಕಾಮಗಾರಿ ನಡೆಸಲು ಅನುಮತಿ ಸಿಕ್ಕಿದ್ದು ಕೂಡಲೇ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ
-ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.