ಕಾರವಾರ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಹಬ್ಬುವಾಡದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಸೆ.2ರಿಂದ 4ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದುದೇವಸ್ಥಾನದ ಪ್ರಚಾರಕ ಉದ್ಧವಾನಂದ ದಾಸ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ವಿವಿಧ ಶಾಲೆಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.
ಕಾರ್ಯಕ್ರಮಗಳು:ಶ್ರೀಕೃಷ್ಣ ಲೀಲೆಗಳ ಕುರಿತು ಪುಣೆಯ ವೃಂದಾವನ ಪ್ರಭುಗಳುಸೆ.2 ಮತ್ತು 3ರಂದು ಸಂಜೆ 5.30ಕ್ಕೆ ಪ್ರವಚನ ನೀಡಲಿದ್ದಾರೆ. ಸೆ.3ರಂದು ದಿನವಿಡೀ ದೇವರ ದರ್ಶನಕ್ಕೆ ಅವಕಾಶವಿದೆ. ಅಂದು ಸಂಜೆ 6.30ಕ್ಕೆ ಅಭಿಷೇಕ, ರಾತ್ರಿ 9ಕ್ಕೆ ಪ್ರವಚನ, 10.30ಕ್ಕೆ ‘ಶ್ರೀಕೃಷ್ಣ– ಸುಧಾಮ’ ನಾಟಕ ಪ್ರದರ್ಶನವಿದೆ. ಅಂದು ರಾತ್ರಿ 12ಕ್ಕೆ ಮಹಾ ಆರತಿ ನೆರವೇರಲಿದೆ ಎಂದು ವಿವರಿಸಿದರು.
ಇಸ್ಕಾನ್ ದೇವಸ್ಥಾನದ ಸಂಸ್ಥಾಪಕ ಶ್ರೀಲ ಪ್ರಭುಪಾದ ಅವರ ಜಯಂತಿಯನ್ನು ಸೆ.4ರಂದು ಹಮ್ಮಿಕೊಳ್ಳಲಾಗಿದೆ.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅದೇದಿನ ಬಹುಮಾನ ವಿತರಣೆ ಮಾಡಲಾಗುವುದು. ಸಂಜೆ 6ಕ್ಕೆ ಭಕ್ತರಿಂದ ಪ್ರಭುಪಾದರ ಗುಣಗಾನವಿದೆ. ಎಲ್ಲ ಕಾರ್ಯಕ್ರಮಗಳೂ ಸಂಜೆ ಆರಂಭವಾಗಲಿದ್ದು, ಮೂರೂ ದಿವಸ ಭಕ್ತರಿಗೆ ಭೋಜನದ ವ್ಯವಸ್ಥೆಯಿದೆ ಎಂದು ಅವರು ಹೇಳಿದರು.
ಇಸ್ಕಾನ್ ದೇವಸ್ಥಾನದ ಉಸ್ತುವಾರಿ ವಹಿಸಿಕೊಂಡಿರುವ ಗೋವಿಂದದತ್ತ ದಾಸ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.