ಮುಂಡಗೋಡ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆಯಡಿ(ಕೆ.ಪಿ.ಎಂ.ಇ) ಅನುಮತಿ ಪಡೆಯದೇ, ಕ್ಲಿನಿಕ್ ನಡೆಸುತ್ತಿದ್ದ ಏಳು ಕಡೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದ ಕೆ.ಪಿ.ಎಂ.ಇ ಪ್ರಾಧಿಕಾರ ತಂಡವು, ಗುರುವಾರ ದಾಳಿ ಮಾಡಿ ಕ್ಲಿನಿಕ್ಗಳನ್ನು ಬಂದ್ ಮಾಡಿ, ನೋಟಿಸ್ ನೀಡಿದ್ದಾರೆ.
ಮಳಗಿಯ ಚನ್ನಬಸವೇಶ್ವರ ಮೆಡಿಕಲ್ಸ್, ರೇಣುಕಾ ಮೆಡಿಕಲ್ಸ್, ಕೋಡಂಬಿಯ ಅಹ್ಮದಸಾಬ್ ಎಂಬುವರ ಕ್ಲಿನಿಕ್, ಪಾಳಾ ಗ್ರಾಮದ ಗುರು ಕ್ಲಿನಿಕ್, ಕಾತೂರ ಗ್ರಾಮದ ಧನ್ವಂತರಿ ಕ್ಲಿನಿಕ್, ಗಣೇಶಪುರದ ಗೋಪಾಲ ಎಂಬುವರ ಕ್ಲಿನಿಕ್, ಕಾವಲಕೊಪ್ಪ ಗ್ರಾಮದ ಧನ್ವಂತರಿ ಕ್ಲಿನಿಕ್ಗಳ ಮೇಲೆ ಕೆ.ಪಿ.ಎಂ.ಇ ಪ್ರಾಧಿಕಾರ ತಂಡವು ದಾಳಿ ನಡೆಸಿ, ಪರಿಶೀಲಿಸಿತು.
‘ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವುದು ಕಂಡುಬಂದಿದ್ದರಿಂದ, ಇವುಗಳನ್ನು ಬಂದ್ ಮಾಡಿಸಲಾಗಿದೆ. ಅಧಿಕೃತ ಪರವಾನಗಿ ಪಡೆಯದ ಹೊರತು, ಕ್ಲಿನಿಕ್ಗಳನ್ನು ತೆರೆಯದಂತೆ ಸೂಚಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಇದೇ ರೀತಿ ದಾಳಿ ನಡೆಸಿ, ಅನಧಿಕೃತ ಕ್ಲಿನಿಕ್ಗಳನ್ನು ಬಂದ್ ಮಾಡಿಸಲಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ದಾಳಿ ಮುಂದುವರೆದಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನರೇಂದ್ರ ಪವಾರ ಹೇಳಿದರು.
ಐಎಂಎ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರವಿ ಹೆಗಡೆ, ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜೀವ ಗಲಗಲಿ, ಡಾ.ಭರತ ಡಿ.ಟಿ., ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.