ಶಿರಸಿ: ವಿದ್ಯಾರ್ಥಿಗಳು ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಇದರಿಂದಾಗಿ ಪಾಲಕ ವರ್ಗ ಕೂಡ ಆತಂಕಕ್ಕೆ ಒಳಗಾಗುವ ಸ್ಥಿತಿ ಬಂದಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ದುಶ್ಚಟಗಳ ದುಷ್ಪರಿಣಾಮದ ಅರಿವು ನೀಡಬೇಕು ಎಂದು ಆಳ್ವ ಫೌಂಡೇಷನ್ ಪ್ರಮುಖ ನಿವೇದಿತ್ ಆಳ್ವ ಹೇಳಿದರು.
ಆಳ್ವ ಫೌಂಡೇಷನ್, ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಘಟಕ, ಅರುಣೋದಯ ಟ್ರಸ್ಟ್ ಜಂಟಿಯಾಗಿ ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ದುಶ್ಚಟಗಳ ವಿರುದ್ಧ ಜಾಗೃತಿ ಅಭಿಯಾನ ಉದ್ಘಾಟಿಸಿ, ಅವರು ಮಾತನಾಡಿದರು. ಸಿಗರೇಟ್ ಸೇದುವವರಿಗಿಂತ ಅದರ ಹೊಗೆಯನ್ನು ಸೇವಿಸಿದವರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಸಮಾಜ ರೂಪಿಸುವ ನಿಟ್ಟಿನಲ್ಲಿ ಯುವಜನರಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಳ್ವ ಫೌಂಡೇಷನ್ ಇಡೀ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ ನಡೆಸಲಿದೆ ಎಂದರು.
ದುಶ್ಚಟಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಡಾ. ದಿನೇಶ್ ಹೆಗಡೆ ಅವರು, ‘ತಂಬಾಕು ಸೇವನೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ. ದೇಶದಲ್ಲಿ ನಿತ್ಯ 2500 ಜನರು ಕ್ಯಾನ್ಸರ್ನಿಂದ ಸಾಯುತ್ತಿದ್ದಾರೆ. ತಂಬಾಕು ಸೇವನೆ ಬಗ್ಗೆ ಮಕ್ಕಳು ಎಚ್ಚರಿಕೆಯಿಂದ ಇರಬೇಕು’ ಎಂದರು. ಡಾ. ತನುಶ್ರೀ ಹೆಗಡೆ, ಡಾ. ಮಂಜುನಾಥ್, ಉಪನ್ಯಾಸಕ ಸುಬ್ರಹ್ಮಣ್ಯ, ಅರುಣೋದಯ ಸಂಸ್ಥೆಯ ಸಿಇಒ ಸುಭಾಷ ಮಂಡೂರು, ಅರುಣೋದಯ ಅಧ್ಯಕ್ಷ ಸತೀಶ್ ನಾಯ್ಕ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.