ಹುಬ್ಬಳ್ಳಿ: ಉತ್ತಕ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಮಾವಿನಮನೆ ಘಟಕದ ಸದಸ್ಯರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಜೂನ್ 8ರಂದು ವಿದ್ಯುತ್ ಸಂರ್ಪಕ ಕಡಿತಗೊಂಡಿದ್ದು, ಈ ವರೆಗೆ ದುರಸ್ತಿ ಮಾಡಿಲ್ಲ. ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನಾ ಆಗದ ಕಾರಣ ಕತ್ತಲಲ್ಲಿ ಜೀವನ ಸಾಗಿಸಬೇಕಾಗಿದೆ. ಈ ಕೂಡಲೇ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳಬೇಕು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿದ್ಯುತ್ ಮಾರ್ಗ ನಿರ್ವಹಣೆಗೆ ಕೇವಲ ಒಬ್ಬ ಲೈನ್ಮೆನ್ ಇದ್ದು, ಹೆಚ್ಚುವರಿ ಇಬ್ಬರು ಲೈನ್ಮೆನ್ ಹಾಗೂ ಮೇಸ್ತ್ರಿಯನ್ನು ನೀಡಬೇಕು. ವಿದ್ಯುತ್ ಮಾರ್ಗಕ್ಕೆ ರ್ಯಾಬಿಟ್ ತಂತಿಗಳನ್ನು ಇನ್ಸುಲೇಟರ್ಗೊಂದಿಗೆ ಅಳವಡಿಸಬೇಕು. ಚಿನ್ನಾಪುರದಿಂದ ಮರಹಳ್ಳಿ ವರೆಗೆಗಿನ ಮಾರ್ಗದ ಮಧ್ಯೆ ತಂತಿಗೆ ತಗುಲಬಹುದಾದ ಮರದ ಟೊಂಗೆಗಳನ್ನು ಈ ಕೂಡಲೇ ಕತ್ತರಿಸಿ ಹಾಕಬೇಕು ಎಂದು ಸಂಘದ ಬಾರೆ– ಮಲಹಳ್ಳಿ ಘಟಕದ ಅಧ್ಯಕ್ಷ ವಿಘ್ನೇಶ್ವರ ಭಟ್ಟ ಹೊಸ್ತೋಟ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.